ಜಡೇಜಾಗೆ ಧೋನಿ ಕೊನೆಯ ಓವರ್ ನೀಡಿದ್ದೇಕೆ?

ಶಾರ್ಜಾ : ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ. ರೋಚಕ ಹಂತಕ್ಕೆ ಬಂದು ತಲುಪಿದ್ದ ಪಂದ್ಯದಲ್ಲಿ ಧೋನಿ ಅವರ ಕೆಟ್ಟ ನಿರ್ಧಾರದಿಂದಾಗಿ ಸೋಲು ಕಾಣುವಂತಾಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬ್ರಾವೋ ಫಿಟ್‌ ಆಗಿರಲಿಲ್ಲ. ಗಾಯಗೊಂಡು ಮೈದಾನ ತೊರೆದ ನಂತರ ಮತ್ತೆ ಅವರು ಮರಳಿ ಬಂದಿರಲಿಲ್ಲ. ಹೀಗಾಗಿ ನನ್ನ ಬಳಿ ಕರ್ರನ್‌ ಹಾಗೂ ಜಡೇಜಾ ಅವರ ಆಯ್ಕೆ ಮಾತ್ರ ಇತ್ತು. ಹೀಗಾಗಿ ಕೊನೆಯ ಓವರ್‌ ಅನ್ನು ಜಡೇಜಾ ಅವರಿಗೆ ನೀಡಿದೆ ಎಂದು ಧೋನಿ ಹೇಳಿದ್ದಾರೆ. ಅಲ್ಲದೇ, ಕೋಚ್‌ ಸ್ಟಿಫನ್‌ ಫ್ಲೇಮಿಂಗ್‌ ಕೂಡ ಇದೇ ಮಾತು ಹೇಳಿದ್ದಾರೆ.

ಕೊನೆಯ ಓವರ್ ನಲ್ಲಿ ದೆಹಲಿ ತಂಡದ ಗೆಲುವಿಗೆ 17 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಬೌಲಿಂಗ್ ಗೆ ಇಳಿದ ಜಡೇಜಾ, ಮೊದಲ ಎಸೆತವನ್ನು ವೈಡ್‌ ಹಾಕಿ ಒಂದು ರನ್ ನೀಡಿದರು. ನಂತರದ ಎಸೆತದಲ್ಲಿ ಸಿಂಗಲ್ ರನ್ ಸಿಕ್ಕಿತು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್ ಪಡೆಯಲಾಯಿತು. ಐದನೇ ಎಸೆತವನ್ನು ಮತ್ತೆ ಪಟೇಲ್ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಚೆನ್ನೈ ತಂಡ ಸೋಲು ಕಾಣುವಂತಾಯಿತು. ಇದಕ್ಕೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಪಂದ್ಯದಲ್ಲಿ ಶಿಖರ್‌ ಧವನ್‌ ಅಜೇಯ 101 ರನ್ ‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಬಾರಿಸಿದರು. ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದು, ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಪರಿಣಾಮ ದೆಹಲಿ ಗೆಲುವಿನ ಕೇಕೆ ಹಾಕಿತು. ಅಂತಿಮವಾಗಿ ಈ ಗೆಲುವಿನೊಂದಿಗೆ ದೆಹಲಿ ತಂಡ 5 ವಿಕೆಟ್‌ ಗಳ ಜಯ ಪಡೆದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕ ಏರಿತು.

Exit mobile version