ಸಕ್ಕರೆ ನಾಡಿನಲ್ಲಿ ಸಿಹಿಯಾದ ಮಾತಿಗೆ ಮರುಳಾಗಿ 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡ ನಾರಿಯರು!!

ಬೆಂಗಳೂರು : ಸಕ್ಕರೆ ನಾಡಿನಲ್ಲಿ ಸಿಹಿಯಾದ ಆಮಿಷಕ್ಕೆ ಮಹಿಳೆಯರು ಬಲಿಯಾಗಿ, ಬರೋಬ್ಬರಿ ರೂ. 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡಿರುವ ಘಟನೆ ನಡೆದಿದೆ.

ಮಂಡ್ಯದ ಫೆಡ್ ಬ್ಯಾಂಕ್‌ ನ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎಂಬ ವ್ಯಕ್ತಿಯಿಂದಲೇ ಈ ರೀತಿಯ ಮೋಸವಾಗಿದೆ. ಬ್ಯಾಂಕ್‌ ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ ಶೇ. 20ರಷ್ಟು ಹಾಗೂ ತಿಂಗಳಿಗೆ ಶೇ. 40 ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ನಂಬಿಸಿ ಈತ ಮಹಿಳೆಯರಿಗೆ ಮೋಸ ಮಾಡಿದ್ದಾನೆ.

ಅಲ್ಲದೇ, ಬರೋಬ್ಬರಿ ರೂ. 20 ಕೋಟಿ ಮೌಲ್ಯದ ಚಿನ್ನ ಸಂಗ್ರಹಿಸಿದ್ದ. ಆದರೆ, ಕೊಟ್ಟ ಚಿನ್ನಕ್ಕೆ ಯಾವುದೇ ದಾಖಲೆ ಪಡೆದಿರಲಿಲ್ಲ.ಮಂಗಳಮುಖಿಯೊಬ್ಬರು ನೀಡಿದ ದೂರಿನಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ವ್ಯಕ್ತಿ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಸೇರಿದಂತೆ ಹಲವರಿಗೆ ವಂಚಿಸಿದ್ದಾನೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿತ, ಮಣಪ್ಪುರಂ, ಮುತ್ತೂಟ್, ಕೋಶಮಟ್ಟಂ ಫೈನಾನ್ಸ್‌ ಕಂಪನಿಗಳಲ್ಲಿಯೂ ಚಿನ್ನ ಅಡ ಇಟ್ಟಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ 30ಕ್ಕೂ ಹೆಚ್ಚು ಮಹಿಳೆಯರಿಂದ ಹತ್ತಾರು ಕೆಜಿ ಚಿನ್ನ ಪಡೆದು ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಐಷಾರಾಮಿ ಜೀವನ ಸಾಗಿಸಲು ಈತ ಈ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ 36 ಜನರಿಗೆ ವಂಚಿಸಿರುವ ಕುರಿತು ತಿಳಿದು ಬಂದಿದೆ. ಸದ್ಯ ಪೊಲೀಸರಿಗೆ ನಾಲ್ಕೂವರೆ ಕೆಜಿ ಚಿನ್ನ, ಒಂದೂವರೆ ಕೋಟಿ ಹಣ ವಂಚಿಸಿರುವ ಬಗ್ಗೆ ತಿಳಿದು ಬಂದಿದೆ. 

Exit mobile version