ಚಿರಂಜೀವಿಗೆ ಮತ್ತೆ ಜೀವ ಬಂದಿದೆ ಎಂದ ನಟಿ ಮೇಘನಾ!

ಬೆಂಗಳೂರು : ಇತ್ತೀಚೆಗಷ್ಟೇ ನಿಧನರಾಗಿರುವ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಅಭಿಮಾನಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೇಘನಾ ಅವರ ಸೀಮಂತ ಕಾರ್ಯ ನಡೆದಿದೆ. ಇದರ ಬೆನ್ನಲ್ಲಿಯೇ ಅಭಿಮಾನಿಗಳೊಂದಿಗೆ ಮೇಘನಾ ಸಂತಸದಿಂದ ಮಾತನಾಡಿದ್ದಾರೆ. ಚಿರಂಜೀವಿ ಸರ್ಜಾ ಅವರು ಕೊನೆಯ ಬಾರಿ ನಟಿಸಿದ್ದ ಚಿತ್ರ ಶಿವಾರ್ಜುನ. ಈ ಸಿನಿಮಾ ಅ. 16ರಂದು ತೆರೆಯ ಮೇಲೆ ಬರಲಿದೆ. ಈ ಸಿಹಿ ಸುದ್ದಿಯನ್ನು ಮೇಘನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಚಿರು ಮತ್ತೆ ಉದಯಿಸುತ್ತಿದ್ದಾರೆ, ಅದಕ್ಕೆ ಕಾರಣ ಅಕ್ಟೋಬರ್ 16ರಂದು ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಪೋಸ್ಟರನ್ನು ಪೋಸ್ಟ್ ಕೂಡ ಮಾಡಿದ್ದಾರೆ. ಅ.17ರಂದು ಚಿರಂಜೀವಿ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಚಿರುವಿನ ಕೊನೆಯ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಶಿವಾರ್ಜುನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿತ್ತು. ಚಿತ್ರದ ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ಈ ಚಿತ್ರ ತಂಡ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತ ಸಾಗಿತ್ತು. ಶಿವತೇಜಸ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ನಿರ್ಮಾಪಕ ಶಿವಾರ್ಜುನ್ ನಿರ್ಮಿಸಿದ್ದಾರೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಇವೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿದೆ.

Exit mobile version