ಹುಬ್ಬಳ್ಳಿ: ಮಹಾದಾಯಿ ವಿಚಾರದಲ್ಲಿ ಮತ್ತೆ ಗೋವಾ ಕ್ಯಾತೆ ತೆಗೆದಿದೆ. ಇದರಿಂದಾಗಿ ಮಹದಾಯಿ ಹೋರಾಟದ ನಾಡಲ್ಲಿ ಮತ್ತೆ ಹೋರಾಟಗಾರರು ಗೋವಾ ನಡೆಗೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಹದಾಯಿ ವಿಚಾರದಲ್ಲಿ ಮತ್ತೆ ಗೋವಾ ಸರ್ಕಾರದಿಂದ ಕ್ಯಾತೆ ಶುರುವಾಗಿದೆ. ಕಳಸಾ ಬಂಡೂರಿ ನಾಲೆಗಳ ಮೂಲಕ ನೀರು ಅಕ್ರಮವಾಗಿ ತಿರುಗಿಸಿರುವ ಆರೋಪ ಮಾಡಿರುವ ಗೋವಾ ಸರ್ಕಾರ, ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಗೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡುವ ಉದ್ಧಟತನ ಪ್ರದರ್ಶನ ಮಾಡಿದೆ ಎಂದು ಮಹಾದಾಯಿ ಹೋರಾಟಗಾರ ಶಂಕರ್ ಅಂಬಲಿ ಕಿಡಿಕಾರಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನೀರು ತಿರುಗಿಸಿರುವ ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿಗಾಗಿ ಹೋರಾಟ ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಕ್ಯಾತೆ ತೆಗೆದ ಗೋವಾ ಸಿಎಂ
ಮಹದಾಯಿ ಐತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂತದಲ್ಲಿದ್ದಾಗ ನೀರು ತಿರುಗಿಸಿ ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದೆ ಎನ್ನುವ ಆರೋಪ ಮಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತೆ ಮಹದಾಯಿ ಕಿಚ್ಚು ಹೊತ್ತಿಸಿದ್ದಾರೆ.
ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿತ್ತು. ಅಲ್ಲದೇ ಇದರ ಆದಿಸೂಚನೆ ಹೊರಡಿಸಲು 2020 ರ ಫೆಬ್ರವರಿ 2 ರಂದು ಆದೇಶ ಸುಪ್ರೀಂ ಹೊರಡಿಸಿದ್ದ ಹಿನ್ನೆಲೆಯಲ್ಲಿ ಫೆ. 27 ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಆಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಕರ್ನಾಟಕ ಮಹದಾಯಿ ನದಿ ತಿರುವು ಯೋಜನೆಗೆ ಸಿದ್ಧತೆ ಮಾಡಿಕೊಂಡಿತ್ತು ಎಂದು ಹೇಳಿದರು.
ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ
ಇದರಿಂದಾಗಿ ಮತ್ತೆ ಕ್ಯಾತೆ ತೆಗೆದು ಸುಪ್ರೀಂಕೋರ್ಟ್ ಗೆ ಗೋವಾ ಸರ್ಕಾರ ಹೋಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ರೈತರಿಗೆ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳಬೇಕೆಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ.
