ನಾಳೆ ರಾಜ್ಯ ಬಂದ್ – ರೈತರ ಹೋರಾಟದಿಂದಾಗಿ ಏನಿರತ್ತೆ? ಏನಿರಲ್ಲ?

ಬೆಂಗಳೂರು : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಧೇಯಕ ವಿರೋಧಿಸಿ ರೈತ ಪರ ಸಂಘಟನೆಗಳು ನಾಳೆ ರಾಜ್ಯದಲ್ಲಿ ಬಂದ್ ಗೆ ಕರೆ ನೀಡಿವೆ. 

ಸರ್ಕಾರಕ್ಕೆ  ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರೈತರು ಈ ಹೋರಾಟ ಕೈಗೊಂಡಿದ್ದಾರೆ. ರೈತರೊಂದಿಗೆ ವಿವಿಧ ಸಂಘಟನೆಗಳು ಕೂಡ ಕೈ ಜೋಡಿಸಿದ್ದರಿಂದಾಗಿ ನಾಳೆ ರಾಜ್ಯವು ಸಂಪೂರ್ಣವಾಗಿ ಬಂದ್ ಆಗಿರಲಿದೆ. 

ನಾಳೆ ಬಂದ್ ಇರುವ ಹಿನ್ನೆಲೆಯಲ್ಲಿ ಈಗಾಗಲೇ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮುಂದೂಡಿ ಆದೇಶ  ಹೊರಡಿಸಿದೆ. ಆದರೆ, ಬಂದ್ ಸಂದರ್ಭದಲ್ಲಿ ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಮಾತ್ರ ಕಾರ್ಯ ನಿರ್ವಹಿಸಲಿವೆ. ಹೊಟೇಲ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸಾರಿಗೆ ಸಂಸ್ಥೆ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಸಂಚಾರ ಇರಲಿವೆ. ಆದರೆ, ನಾಳೆಯ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. 

ರೈತ ಪರ ಸಂಘಟನೆಗಳೊಂದಿಗೆ ಐಕ್ಯ ಹೋರಾಟ ಸಮಿತಿ, ರೈತ ಹೋರಾಟ ಸಂಘಟನೆಗಳು, ಕನ್ನಡಪರ ಹೋರಾಟ ಸಂಘಟನೆಗಳು, ನಾರಾಯಣಗೌಡರ ಕರವೇ ಸಂಘಟನೆ, ಪ್ರವೀಣ್ ಶೆಟ್ಟಿ ಕರವೇ ಬಣ, 25ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ವಿವಿಧ ಸಂಘಟನೆಗಳು, ಮಹಾದಯಿ ಹೋರಾಟ ಸಂಘಟನೆ, ಓಲಾ, ಊಬರ್, ಕ್ಯಾಬ್, ಆಟೋ,ಟ್ಯಾಕ್ಸಿ ಅಸೋಸಿಯೇಶನ್, ಆಟೋ ಮಿತ್ರ, ಪೀಸ್ ಆಟೋ ಸಂಘಟನೆ, ಖಾಸಗಿ ಟೂರಿಸ್ಟ್ ಮತ್ತು ಟ್ಯಾಕ್ಸಿ ಮಾಲೀಕರ ಸಂಘಗಳು ಹೋರಾಟಕ್ಕೆ ಬೆಂಬಲ ನೀಡಿವೆ. ಹೀಗಾಗಿ ಹೋರಾಟ ನಾಳೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳೆ ಓಲಾ – ಉಬರ್, ಆಟೋ – ಟ್ಯಾಕ್ಸಿ ಸಂಘಗಳು ಬಂದ್ ಗೆ ಬೆಂಬಲ ನೀಡಿರುವ ಕಾರಣಕ್ಕೆ ಈ ಸೇವೆಗಳು ಜನರಿಗೆ ಇರುವುದಿಲ್ಲ. ಖಾಸಗಿ ಬಸ್, ಲಾರಿ ಸೇವೆಗಳು ಬಂದ್ ಆಗಿರಲಿವೆ. ಅಂಗಡಿ –ಮುಂಗಟ್ಟುಗಳು ಬಂದ್ ಆಗಿರಲಿವೆ. ಮಾಲ್ ಗಳು ತೆರೆದಿರುವುದಿಲ್ಲ. ಆದರೆ, ಕೈಗಾರಿಕೆಗಳು ಮಾತ್ರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಿವೆ ಎಂದು ತಿಳಿದು ಬಂದಿದೆ. 

Exit mobile version