ಶಿರಹಟ್ಟಿ: ನೀರಿನಿಂದ ತುಂಬಿಕೊಂಡ ಗುಂಡಿಗಳನ್ನು ನೋಡಿದರೆ ಅವು ಪಕ್ಕಾ ಮೀನಿನ ಗುಂಡಿಗಳಂತೆ ಕಾಣುತ್ತವೆ. ಆದ್ರೆ ಅವು ಗುಂಡಿಗಳಲ್ಲ. ಅರೇ ಇದೇನಿದು ಗುಂಡಿಗಳು ಅಂತಿರಾ, ಮತ್ತೆ ಗುಂಡಿಗಳಲ್ಲ ಅಂತಿರಾ ಅಂತ ಕನ್ಫ್ಯೂಸ್ ಆಗಬೇಡಿ ಇದು ಗ್ರಾಮವೊಂದ ರಸ್ತೆಯ ಕಥೆ.
ಮಾಯವಾದ ರಸ್ತೆಗಳು, ರಸ್ತೆಗಳಲ್ಲಿ ನಿರ್ಮಾಣವಾದ ದೊಡ್ಡ-ದೊಡ್ಡ ಗುಂಡಿಗಳು, ದುರಸ್ಥಿಯಾಗದ ರಸ್ತೆಯಿಂದ ಜನರ ಸಂಕಷ್ಟ. ಇದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ರಸ್ತೆಗಳ ಕಥೆ. ಜನಪ್ರತಿನಿಧಿಗಳ ನಿರ್ಲಕ್ಷವೇ ಗ್ರಾಮದ ರಸ್ತೆಯ ಈ ಸ್ಥಿತಿಗೆ ಕಾರಣ ಅನ್ನೋದು ಸ್ಥಳೀಯರ ಆಕ್ರೋಶ.
ರಸ್ತೆ ದುರಸ್ಥಿ ಮಾಡದ ಕಾರಣ ರಸ್ತೆಯಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ವೃದ್ಧರು, ಮಕ್ಕಳು ಓಡಾಡಲು ಪರಿತಪಿಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗಬೇಕು.
ಆಂಜನೇಯ, ಕನ್ನಡಪರ ಸಂಘನೆ ಕಾರ್ಯಕರ್ತ.
ರಸ್ತೆಗಳಲ್ಲಿ ನಿರ್ಮಾಣವಾದ ತಗ್ಗು ಗುಂಡಿಗಳಿಂದ ನೀರು ಸಂಗ್ರಹವಾಗಿ ಸಾಂಕ್ರಾಮಿಕ ಕಾಯಿಲೆಗೂ ಕಾರಣವಾಗುತ್ತಿದೆ. ಮಳೆ ಬಂದರೆ ಸಾಕು ಕೆಸರು ಗದ್ದೆಯಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ನಡುವೆ ಮತ್ತೆ ಗ್ರಾಮ ಪಂಚಾಯಿತಿ ಚುನಾವಣೆಗೆ ಜನನಾಯಕರು ತಯಾರಿ ನಡೆಸಿದ್ದಾರೆ. ಅಧಿಕಾರದಲ್ಲಿದ್ದವರು ಇನ್ನಿಲ್ಲದ ಕುಂಟು ನೆಪ ಹೇಳುತ್ತಿದ್ದರೆ, ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿರುವವರು ಸ್ವರ್ಗವನ್ನೇ ಭೂಮಿಗೆ ಇಳಿಸುವ ಮಾತನಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.
ಈ ಬಗ್ಗೆ ಪ್ರತಿಕ್ರಿಯೇಗಾಗಿ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಓ ಅವರನ್ನು ಉತ್ತರಪ್ರಭ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಪಿಡಿಓ ಅವರ ಮೊಬೈಲ್ ಸಂಖ್ಯೆ ನಾಟ್ ರಿಚೇಬಲ್ ಆಗಿತ್ತು.
ಈಗಲಾದರೂ ಜನಪ್ರತಿನಿಧಿಗಳು ಈಕಡೆ ಗಮನ ಹರಿಸಬೇಕು. ರಸ್ತೆ ದುರಸ್ಥಿಗೆ ಮುಂದಾಗುವ ಮೂಲಕ ಜನರ ನೆಮ್ಮದಿ ಬದುಕಿಗೆ ಕಾರಣವಾಗಬೇಕು ಎನ್ನುವುದು ನಮ್ಮ ಆಶಯ.
