ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಏದುಸಿರು ಬಿಡುತ್ತಿರುವ ಬಿಜೆಪಿ ವಣ್ಣಯಾರ್ ಸಮುದಾಯವನ್ನು ಒಲಿಸಿಕೊಳ್ಳಲು ಈ ನೇಮಕ ಮಾಡಿದೆ ಎನ್ನಲಾಗಿದೆ.
ಚೆನ್ನೈ: ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿಯನ್ನು ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರಿದ್ದರು. ಈ ಕುರಿತು ಮಾತನಾಡಿರುವ ವಿದ್ಯಾರಾಣಿ, ಸಾಮಾಜಿಕ ಕೆಲಸ ಮಾಡುವುದು ನನ್ನ ಗುರಿ. ಯಾವುದೇ ಒಂದು ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ಮಾನವೀಯತೆಯೇ ಮುಖ್ಯ’ ಎಂದಿದ್ದಾರೆ.
ಕಾನೂನು ಪದವಿ ಪಡೆದಿರುವ 29 ವರ್ಷದ ವಿದ್ಯಾರಾಣಿ ಕೃಷ್ಣಗಿರಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ‘ನನ್ನ ತಂದೆ ಆ ಸಮಸ್ಯಾತ್ಮಕ ಹಾದಿ ಆಯ್ದುಕೊಳ್ಳಲು ಅಂದಿನ ಪರಿಸ್ಥಿತಿಯೇ ಕಾರಣವಾಗಿರಬಬಹುದು’ ಎನ್ನುವ ವಿದ್ಯಾ, ‘ನಾನು ತಂದೆಯನ್ನು ನೋಡಿದ್ದು ಒಂದೇ ಸಲ. ಕರ್ನಾಟಕದ ಹನೂರು ಸಮೀಪದ ಗೋಪಿನಾಥಂನಲ್ಲಿರುವ ನನ್ನ ಅಜ್ಜನ ಮನೆಗೆ ರಜೆಗೆ ಹೋಗಿದ್ದೆ ಆಗ ನನಗೆ ಆರು ವರ್ಷ. ನಾನು ಅಲ್ಲಿ ಮಕ್ಕಳೊಂದಿಗೆ ಆಡುವಾಗ ತಂದೆ ಬಂದು ಮಾತನಾಡಿಸಿ, ಚೆನ್ನಾಗಿ ಓದಬೇಕು ಎಂದು ಹೇಳಿದ್ದು ನೆನಪಿದೆ’ ಎನ್ನುತ್ತಾರೆ.
2000ರಲ್ಲಿ ಕನ್ನಡ ಚಿತ್ರರಂಗದ ಮೇರು ನಟ ರಾಜಕುಮಾರ್ ಅವರನ್ನು ಅಪಹರಿಸಿ, ಬಿಡುಗಡೆ ಮಾಡಿದ್ದ ವೀರಪ್ಪನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದಾದ ನಾಲ್ಕು ವರ್ಷಗಳ ನಂತರ ಕೆ.ವಿಜಯಕುಮಾರ ನೇತೃತ್ವದ ತಮಿಳುನಾಡು ಎಸ್ಟಿಎಫ್ ವೀರಪ್ಪನ್ ಅನ್ನು ಎನ್ ಕೌಂಟರಿನಲ್ಲಿ ಹತ್ಯೆ ಮಾಡಿತ್ತು. ವಿಜಯಕುಮಾರ್ ಬರೆದ ಪುಸ್ತಕದಲ್ಲಿ ವಿದ್ಯಾರಾಣಿಯ ಪ್ರಸ್ತಾಪವೂ ಇದೆ. ‘ಗರ್ಭಿಣಿಯಾಗಿದ್ದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪೊಲೀಸರಿಗೆ ಶರಣಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಯಿತು. ತಾಯಿ-ಮಗುವನ್ನು ಮಹಿಳಾ ವಸತಿ ಗೃಹದಲ್ಲಿ ಇಡಲಾಗಿತ್ತು. ಎಸ್ಟಿಎಫ್ ಅಧಿಕಾರಿಯೊಬ್ಬರು ಮಗುವಿಗೆ ವಿದ್ಯಾರಾಣಿ ಎಂದು ನಾಮಕರಣ ಮಾಡಿದ್ದರು’ ಎಂದು ವಿಜಯಕುಮಾರ್ ಬರೆದಿದ್ದಾರೆ.
ತಮಿಳುನಾಡಿನ ಪ್ರಬಲ ಒಬಿಸಿ ಸಮುದಾಯವಾಗಿರುವ ವಣ್ಣಿಯಾರ್ ಸಮುದಾಯಕ್ಕೆ ವಿದ್ಯಾ ಸೇರಿದ್ದಾರೆ. ವಣ್ಣಿಯಾರ್ ಪಾರ್ಟಿ ಎಂದೇ ಕರೆಯಲ್ಪಡುವ ಪಿಎಂಕೆ ಜೊತೆಗೆ ತಾಯಿ ಮುತ್ತುಲಕ್ಷ್ಮಿ ಗುರುತಿಸಿಕೊಂಡಿದ್ದಾರೆ. ತಾಯಿ ಮತ್ತು ಸಮುದಾಯದ ವಿರೋಧವನ್ನು ಮೆಟ್ಟಿ ನಿಂತ ವಿದ್ಯಾ ಬೇರೆ ಸಮುದಾಯದ ಯುವಕನೊಂದಿಗೆ ವಿವಾಹವಾಗಿದ್ದಾರೆ.
