ಗದಗ: ಹೆಸರು ಹಾಗೂ ಗೋವಿನ ಜೋಳ ಬಿತ್ತನೆಯಾಗಿದ್ದು, ಈಗಾಗಲೇ ಹೆಸರು ಹೂವಾಡುವ ಹಂತ ಹಾಗೂ ಗೋವಿನ ಜೋಳ ಸುಮಾರು 30 ರಿಂದ 40 ದಿವಸದ ಬೆಳೆ ಇರುತ್ತವೆ. ಹೆಸರು ಬೆಳೆಯಲ್ಲಿ ವಿವಿದೆಡೆ ಹಳದಿ ರೋಗ ಮತ್ತು ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ಬಾಧೇ ಹೆಚ್ಚಿದೆ. ಗದಗ ತಾಲೂಕಿನ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ನೇತೃತ್ವದ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಅಡವಿ ಸೋಮಾಪೂರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿತು. ಹೆಸರು ಬೆಳೆಯಲ್ಲಿ ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಮೆಕ್ಕೆ ಜೋಳ ಉತ್ತಮವಾಗಿ ಬೆಳೆಯಲು, ಲದ್ದಿ ಹುಳು ಹಾಗೂ ಇತರೇ ಕೀಟಗಳ ದಾಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿರ್ವಹಣಾ ಕ್ರಮಗಳ ಅಗತ್ಯವಿದೆ. ಕೀಟನಾಶಕಗಳಾದ ಕ್ಲೊರ್ಯಾಂಟ್ರಿನಿಲಿಪ್ರೋಲ್ 18.5 ಇ.ಸಿ.ಯನ್ನು 0.4 ಮಿ. ಲೀ. ಅಥವಾ ಲ್ಯಾಮ್ಡಾಸೈಹ್ಯಾಲೋಥ್ರೀನ್ 49 ಇ.ಸಿ.ಯನ್ನು 1 ಮಿ.ಲೀ. ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ಎಸ್.ಜಿ. ಯನ್ನು 0.5 ಮಿ.ಲೀ. ಅಥವಾ ಸ್ಪೆನೋಸ್ಯಾಡ್ 45 ಎಸ್.ಸಿ.ಯನ್ನು 0.2 ಮಿ.ಲೀ. ಅಥವಾ ಇಂಡಾಕ್ಸಿಕಾರ್ಬ್ 14.5 ಎಸ್.ಸಿ.ಯನ್ನು 0.5 ಮಿ.ಲೀ. ಅಥವಾ ಸ್ಪನೆಟ್ರಾಮ್ 11.7 ಎಸ್.ಸಿ.ಯನ್ನು 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು
ಹೆಸರು ಬೆಳೆಯಲ್ಲಿ ಕಂಡು ಬಂದ ಹಳದಿ ರೋಗ ಸಾಂಕ್ರಾಮಿಕವಾಗಿ ಹರಡುವ ಮುನ್ನವೇ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮಳೆ ಕೊರತೆ ಹಾಗೂ ಮೋಡ ಮುಸುಕಿದ ವಾತಾವಣಯಿಂದಾಗಿ ಹೆಸರು ಬೆಳೆಗೆ ಹಳದಿ ರೋಗ ಹರಡುವ ಸಾಧ್ಯತೆ ಇರುತ್ತದೆ. ಒಂದು ಬಾರಿ ಹಳದಿ ರೋಗ ಕಾಣಿಸಿಕೊಂಡರೇ ನಿಯಂತ್ರಣ ಬರುವುದು ಕಷ್ಠ ಸಾಧ್ಯ.
“ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ ಸೇರಿಸಿ ಬೆಳೆಗೆ ಸಿಂಪಡಿಸಬೇಕು. ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಕಿತ್ತು ಹೊಳಬೇಕು ಇಲ್ಲವೇ ಸುಡ ಬೇಕು. ಕ್ರಿಮಿನಾಶಕವನ್ನು ಬೆಳೆಗೆ ಸಿಂಪಡಿಸುವುದಕ್ಕಿಂತ ಮೊದಲು ಬದುವಿಗೆ ಸಿಂಪಡಿಸಿದರೇ ಅಲ್ಲಿ ವಾಸವಾಗಿರುವ ಜಿಗಿಹುಳು ನಿಯಂತ್ರಣಕ್ಕೆ ಬರುತ್ತವೆ. ಬಿತ್ತನೆ ಸಮಯದಲ್ಲಿ ಟ್ರೆಂಕೋಡರ್ಮಾ ಪುಡಿಯಿಂದ ಬೀಜೋಪಚಾರ ಮಾಡಿದರೆ ಹಾಗೂ ಬದುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಹಳದಿ ರೋಗದ ಭೀತಿ ಇರುವುದಿಲ್ಲ ಎಂದು ತಂಡ ರೈತರಿಗೆ ಮಾಹಿತಿ ನೀಡಿತು.