ದುಗೂಡದ ಮದ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು..!: ಪರೀಕ್ಷೆ ಮುಗಿಸಿದ ಸಿದ್ದಪ್ಪ ಮನೆಗೆ ಮರಳಲೇ ಇಲ್ಲ..!

ಮುಂಡರಗಿ: ಗೆಳೆಯರಿಗೆ ಅಚ್ಚುಮೆಚ್ಚಾಗಿದ್ದಾತ. ನಿನ್ನೆಯಷ್ಟೆ ಭವಿಷ್ಯದ ನಿರ್ಣಾಯಕ ಘಟ್ಟದ ಮೊದಲ ಪರೀಕ್ಷೆ ಮುಗಿಸಿದ್ದ. ಸಹಪಾಠಿಗಳೊಂದಿಗೆ ಕೂಡಿ ಪರೀಕ್ಷೆ ಬರೆದು ಪರೀಕ್ಷಾ ಕೇಂದ್ರದಿಂದ ಮನೆಗೆ ಮರಳಿದಾತ ಮನಿ ಸೇರಲೇ ಇಲ್ಲ. ಈಗ-ಆಗ ಬಂದಾನು ಅಂತ ಕಾದು ಕುಳಿತ ತಂದೆ-ತಾಯಿಯರಿಗೆ ಕೊನೆಗೂ ಆಘಾತ ನೀಡಿ ಹೋಗಿ ಬಿಟ್ಟ.
ನಿನ್ನೆ ಸಿದ್ದಪ್ಪನೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇಂದು ಸಹಪಾಠಿಯ ಅಗಲಿಕೆಯ ದುಗೂಡದಲ್ಲಿಯೇ ಪರೀಕ್ಷೆಗೆ ಹಾಜರಾದರು. ಇದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಿದ್ದಪ್ಪ ಜೀವನದ ಅಂತಿಮ ಪರೀಕ್ಷೆ ಮುಗಿಸಿ ನಪಾಸ್ ಆಗಿ ಹೋದ ಕಥೆ..!

ಮೊನ್ನೆಯಷ್ಟೆ ಕಲಕೇರಿಯ ಪರೀಕ್ಷಾ ಕೇಂದ್ರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿ ಮನೆಗೆ ಮರಳುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದರು. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಪ್ಪ ಸಾವನ್ನಪ್ಪಿದ. ತಂದೆ ಮಲ್ಲಪ್ಪ, ತಾಯಿ ಮಾದೇವಿ ಯವರಿಗೆ ಮಗನ ಅಗಲಿಕೆ ಮಾತ್ರ ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಮೂವರು ಗಂಡು ಮಕ್ಕಳಲ್ಲಿ ಈ ಮನೆಗೆ ಸಿದ್ದಪ್ಪನೇ ಕಿರಿಯ ಪುತ್ರ. ಕಿರಿಯ ಮಗನ ಬಗ್ಗೆ ಕನಸಿನ ಮೂಟೆ ಹೊತ್ತ ತಂದೆಗೆ ಜವರಾಯ ನಿರಾಶೆ ಮಾಡಿದ್ದಾನೆ. ಸಿದ್ದಪ್ಪನ ಅಣ್ಣ ರಮೇಶ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ. ಕಳೆದ ಮೂರು ವರ್ಷಗಳ ಹಿಂದಷ್ಟೆ ಬಾಗೇವಾಡಿ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ್ದ. ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದ. ರಮೇಶನಂತೆ ಸಿದ್ದಪ್ಪ ಕೂಡ ಉನ್ನತ ವ್ಯಾಸಾಂಗ ಮಾಡಬೇಕು ಎನ್ನುವ ಕನಸು ಮಲ್ಲಪ್ಪನದ್ದಾಗಿತ್ತು.

ಪಾಲಕರಿಗೆ ಉತ್ತರಪ್ರಭ ಮನವಿ

• ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಸಾರಿಗೆ ಸೌಲಭ್ಯ ನೀಡಿದೆ. ಇದರ ಸದುಪಯೋಗ ಪಡೆದುಕೊಳ್ಳಿ

• ನಿಮ್ಮ ಮಕ್ಕಳನ್ನು ಬೈಕಿನಲ್ಲಿ ಪರೀಕ್ಷೆಗೆ ಕಳುಹಿಸಬೇಡಿ

• ನೀವೂ ಕೂಡ ನಿಮ್ಮ ಮಕ್ಕಳನ್ನು ಬೈಕಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಡಿ

• ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬಿ.

ಈ ಘಟನೆಯಿಂದ ವಿದ್ಯಾರ್ಥಿಗಳ ಮನಸ್ಸು ಘಾಸಿಗೊಂಡಿದೆ. ಶಾಲೆಯಲ್ಲಿ 54 ವಿದ್ಯಾರ್ಥಿಗಳಲ್ಲಿ ಸಿದ್ದಪ್ಪ ಸಾವನ್ನಪ್ಪಿದರೆ, ಗಾಯಗೊಂಡ ಇನ್ನುಳಿದ ಇಬ್ಬರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ 51 ವಿದ್ಯಾರ್ಥಿಗಳು ನಿನ್ನೆ ಪರೀಕ್ಷೆಗೆ ಹಾಜರಾದರು.

ಈ ಘಟನೆಯ ಕಾರಣ ನಿನ್ನೆಯಿಂದಲೇ ಶಾಲೆಯ ಸಿಬ್ಬಂಧಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಬಸ್ ಮೂಲಕ ಪರೀಕ್ಷೆಗೆ ಕಳುಹಿಸುವಂತೆ ಪಾಲಕರಿಗೆ ಮನವಿ ಮಾಡಿಕೊಂಡಿದ್ದಾರೆ.

Exit mobile version