ಗದಗ(ನರೆಗಲ್): ನವೆಂಬರ್, ಡಿಸೆಂಬರ್ ಅವಧಿಯಲ್ಲಿ ಈರುಳ್ಳಿಗೆ ಬಂದ ಭಾರಿ ಧಾರಣೆಯಿಂದ ರೈತರು ಖುಷಿಗೊಂಡಿದ್ದರು. ಅದರಲ್ಲೂ ಹೊಲದಲ್ಲಿನ ಈರುಳ್ಳಿಯು ರಾತ್ರೋರಾತ್ರಿ ಕಳ್ಳತನವಾಗಿ ನರೇಗಲ್ ಪಟ್ಟಣವು ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು.
ಅದೇ ದರದ ನಿರೀಕ್ಷೆಯೊಂದಿಗೆ ಪಟ್ಟಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಉತ್ತಮ ಇಳುವರಿಯೂ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಯಾರು ಕೇಳದಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಸೂಕ್ತ ಬೆಲೆಯಿಲ್ಲದೆ ರೈತರು ಪರದಾಡುವಂತಾಗಿದೆ.
ಹನಮಂತಗೌಡ ಕಳಕನಗೌಡ ಹುಲ್ಲೂರು ಎಂಬ ಸ್ಥಳೀಯ ರೈತ ಸಾವಿರಾರು ರೂಪಾಯಿ ಅಡ್ವಾನ್ಸ್ ನೀಡಿ ಲಾವಣಿಯಲ್ಲಿ ತೋಟ ಮಾಡಿದ್ದು ನಾಲ್ಕು ಎಕರೆ ನೀರಾವರಿಯಲ್ಲಿ ಈರುಳ್ಳಿಯನ್ನು ಬೆಳೆದಿದ್ದಾರೆ. ಆದರೆ ಲಾಕ್ಡೌನ್ ಪರಿಣಾಮ ಒಂದೂವರೆ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಹೀಗಾಗಿ ಬೆಳೆದ ಈರುಳ್ಳಿಯು ಕೊಳೆಯುವಂತಾಗಿದೆ. ಶುಕ್ರವಾರ 15 ಚೀಲ ಈರುಳ್ಳಿಯನ್ನು ಗದಗ ಎಪಿಎಂಸಿಗೆ ಕಳುಹಿಸಿದ್ದೇವೆ. ದೊಡ್ಡ ಗಡ್ಡೆ ಇದ್ದರೂ ಕ್ವಿಟಾಲ್ಗೆ 100 ರೂಪಾಯಿಯಂತೆ ಕೇಳುತ್ತಿದ್ದರಿಂದ ಎಲ್ಲಾ ಈರುಳ್ಳಿಯನ್ನು ಅಲ್ಲಯೇ ಬಿಟ್ಟು ಊರಿಗೆ ಬಂದಿದ್ದೇವೆ. ಇನ್ನೂ ಯಾರು ಸಹ ಹೆಚ್ಚಿನ ಬೆಲೆಗೆ ಖರೀದಿ ಮಾಡಲು ಬಂದಿಲ್ಲ ಎಂದು ರೈತ ತನ್ನ ಅಳಲನ್ನು ಉತ್ತರಪ್ರಭ ಗೆ ಹಂಚಿಕೊಂಡರು. ಇನ್ನೂ 60 ಚೀಲಕ್ಕೂ ಹೆಚ್ಚು ಆಗುವಷ್ಟು ಈರುಳ್ಳಿಯನ್ನು ಮಳೆ ಬಂದಾಗ ಸೋರುವ ಪಟ್ಟಣದ ಗಾಂಧಿ ಭವನದಲ್ಲಿ ಹಾಕಿದ್ದೇವೆ. ಈಚೆಗೆ ಸುರಿದ ಭಾರಿ ಮಳೆಯಿಂದ ಮತ್ತು ಕೊಳ್ಳುವವರೂ ಇಲ್ಲದೇ ಇರುವುದರಿಂದ ಈರುಳ್ಳಿ ಕೊಳೆಯತೊಡಗಿದೆ ಎಂದರು.
ಬೀಜ, ಗೊಬ್ಬರ, ಔಷಧಿ, ಆಳು ಸೇರಿದಂತೆ 1.5 ಲಕ್ಷ ರೂಪಾಯಿ ಖರ್ಚು ಮಾಡಿ ಸಾಲದಲ್ಲಿದ್ದೇನೆ. ಲಾಕ್ಡೌನ್ ನಿಭಾಯಿಸುವುದು ಎಂದರೆ, ಮನೆಯಿಂದ ಯಾರೂ ಹೊರ ಬರದಂತೆ ನೋಡಿಕೊಳ್ಳುವುದಷ್ಟೇ ಎಂದು ಸರ್ಕಾರ ಭಾವಿಸಿದ್ದರ ಪರಿಣಾಮ ಬೆಲೆ ಕುಸಿದಿದೆ. ಕೃಷಿ ಹಾಗೂ ರೈತರ ಬೆಳೆಗಳ ಕುರಿತು ವಿಚಾರ ಮಾಡಬೇಕು. ಇಲ್ಲವಾದರೆ ಈರುಳ್ಳಿಯಂತೆ ನಮ್ಮ ಬದುಕು ಸಹ ಕೊಳೆಯುವ ಸಾಧ್ಯತೆ ಇದೆ ಎಂದರು.
ಸರ್ಕಾರ ಸೂಕ್ತ ಬೆಲೆಗೆ ನೇರವಾಗಿ ರೈತರ ಈರುಳ್ಳಿಯನ್ನು ಖರೀದಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈರುಳ್ಳಿ ಬೆಳೆಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಹೊಳೆಆಲೂರು ಎಪಿಎಂಸಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ ಒತ್ತಾಯಿಸಿದರು.
ನಿಂಗಪ್ಪ ಬಿ.ಮಡಿವಾಳರ್