ಟೀಕೆ ಮಾಡದಿರೆ ಮಾತ್ರ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಉಳಿಯುತ್ತಾರೆ: ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯ

ಕೊಪ್ಪಳ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವ ದ್ವಂದ್ವನೀತಿ ಬಿಡಬೇಕೆಂದು ಕೃಷಿ ಸಚಿವ ಬಿ.ಸಿ.‌ಪಾಟೀಲ್ ತೀವ್ರ ವಾಗ್ದಾಳಿ‌ ನಡೆಸಿದರು.

ಇತ್ತೀಚೆಗೆ ವಿಧಾನಸೌಧದಲ್ಲಿ‌ ಸರ್ಕಾರ ನಡೆಸಿದ ಸರ್ವಪಕ್ಷಗಳ‌ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ಸಂಕಷ್ಟ ಸಮಯದಲ್ಲಿ‌ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹತ್ತಾರು ಬಾರಿ ಹೊಗಳಿದರು. ಹೀಗೆ ಹೇಳಿದವರು ಹೊರಗೆ ಅನಗತ್ಯ ಟೀಕೆ-ಆರೋಪ ಮಾಡುತ್ತಿದ್ದಾರೆ.‌ ಇಂಥ ಇಬ್ಬಗೆ ನೀತಿಯನ್ನು ಅವರು ಬಿಡಬೇಕು ಎಂದರು.

ಹುರುಳಿಲ್ಲದಿದ್ದರೂ ಟೀಕೆ ಮಾಡುತ್ತಲೇ ಇರುವ ಡಿಕೆಶಿ ಅವರಿಗೆ ಟೀಕೆ ಮಾಡದಿದ್ದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಕಿತ್ತೊಗೆಯುತ್ತಾರೆ ಎಂಬ ಭೀತಿ ಆವರಿಸಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಮುಖಂಡ ಹೆಚ್.ಡಿ.‌ಕುಮಾರಸ್ವಾಮಿ ಮಾಡುವ ಹುರುಳಿಲ್ಲದ ಟೀಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಏಪ್ರಿಲ್ ತಿಂಗಳಿನಲ್ಲಿ ತೀರಾ ಅವಶ್ಯಕ ಸೇವೆ ಹೊರತುಪಡಿಸಿ ‌ಉಳಿದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ.‌ ಈಗ ಅವು ಪುನಾರಂಭವಾಗಿದ್ದು ಎಲ್ಲ ಬಿಲ್ ಗಳನ್ನು ಕ್ರಮವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಬಿಲ್ ಮತ್ತು ಸಂಬಳ ನೀಡಲಾಗದಂಥ ಮಟ್ಟಕ್ಕೆ ಸರ್ಕಾರ ಹೋಗಿಲ್ಲ. ಯಾರಿಗೂ ತೊಂದರೆಯಾಗದಂತೆ ಶಕ್ತಿಮೀರಿ ಶ್ರಮಿಸುತ್ತಿದೆ ಎಂದರು.

Exit mobile version