ಬೆಂಗಳೂರು: ಫೈನಾನ್ಸ್ ನಡೆಸುತ್ತಿದ್ದ ವ್ಯಕ್ತಿಯ ಅಪಹರಣಕ್ಕೆ ಜೈಲಿನಲ್ಲಿದ್ದ ರೌಡಿ ಪ್ರಯತ್ನಿಸಿದ ಘಟನೆ ನಡೆದಿದೆ. ಇಲ್ಲಿಯ ಕಗ್ಗಲೀಪುರ ಠಾಣಾ ವ್ಯಾಪ್ತಿಯ ಗುಳಕಮಲೆ ನಿವಾಸಿ ಮಂಜ ಅಲಿಯಾಸ್ ಬೋಂಡ ಮಂಜ ಪರಪ್ಪನ ಅಗ್ರಹಾರದಿಂದಲೇ ಕಿಡ್ನಾಪ್ಗೆ ಸಂಚು ರೂಪಿಸಿ, ತನ್ನ ಚೇಲಾಗಳ ಮೂಲಕ ಅದನ್ನು ಕಾರ್ಯರೂಪಕ್ಕೆ ತಂದಿದ್ದಾನೆ.
ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಿ.ಕೆ.ಪಾಳ್ಯದಲ್ಲಿ ಫೈನಾನ್ಸ್ ವ್ಯವಹಾರ ಹಾಗೂ ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದ ರವಿ ಎಂಬಾತನಿಗೆ ಬೋಂಡ ಮಂಜ ಹಣದ ಬೇಡಿಕೆ ಇಟ್ಟಿದ್ದ. ಹಣ ನೀಡಲು ರವಿ ನಿರಾಕರಿಸಿದ್ದರಿಂದ ಕಿಡ್ನ್ಯಾಪ್ ಸಂಚು ರೂಪಿಸಿದ್ದ. ಶನಿವಾರ ಸಂಜೆ ಕಾರ್ ಹಾಗೂ ದ್ವಿಚಕ್ರ ವಾಹನದಲ್ಲಿ ಬಂದ 6 ಜನರ ತಂಡ ರವಿಯನ್ನ ಅಪಹರಿಸಿ ಕನಕಪುರದ ಕಗ್ಗಲಿಪುರ ರಸ್ತೆಯತ್ತ ಎಳೆದೊಯ್ದಿದ್ದಾರೆ. ಬಳಿಕ ರವಿ ಬಳಿಯಿದ್ದ ರೂ. 3 ಸಾವಿರ ರೂಪಾಯಿ ಹಾಗೂ ಎಟಿಎಂನಲ್ಲಿದ್ದ ರೂ. 3.5 ಸಾವಿರ ಕಿತ್ತುಕೊಂಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ತರುವಂತೆ ಹೆಂಡತಿಗೆ ಸೂಚಿಸುವಂತೆ ರವಿಗೆ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಪಿಗಳು ರವಿಯನ್ನು ಬಿಟ್ಟು, ಒಂದು ವಾರದೊಳಗೆ ರೂ. 1 ಲಕ್ಷ ತರಬೇಕು. ಈ ವಿಷಯವನ್ನು ಪೊಲೀಸರಿಗೆ ತಿಳಿಸಬಾರದು ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ. ರವಿ ಕೂಡ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದು, ರೌಡಿಗಳ ಜೊತೆ ಆಗಾಗ ಪಾರ್ಟಿ ಮಾಡುತ್ತಿದ್ದ. ಇದರಿಂದಾಗಿ ಆತನ ಬಳಿ ಹಣವಿದೆ ಎಂದು ಬೋಂಡ ಮಂಜ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಈ ಬಾರಿಯೂ ಸಹ ಹಣಕ್ಕಾಗಿ ಬೇಡಿಕೆ ಇಟ್ಟಾಗ ರವಿ ನಿರಾಕರಿಸಿದ್ದ. ಹೀಗಾಗಿ ತನ್ನ ಸಹಚರರನ್ನು ಬಿಟ್ಟು ಈ ಕೆಲಸ ಮಾಡಿಸಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸದ್ಯ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
