ಆತ್ಮಿಯರೇ,
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ಡಾ.ಸಂಗಯ್ಯ ಶೇ ಶಿರೂರಮಠ ಅವರು. ಪುಣೆಯ ಡಿಫೆನ್ಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಾ ಓದು ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡ ಡಾ.ಸಂಗಯ್ಯ ಅವರ, ಓದಿನ ಅಭಿರುಚಿಗೆ ತಕ್ಕ ಇಲಾಖೆಯೇ ಸಿಕ್ಕಿದೆ. ಸಾಹಿತ್ಯದಲ್ಲಿ ಭಾವಗೀತೆ, ಕಥಾ ಪ್ರಕಾರಗಳಲ್ಲಿ ಇವರ ಸಂಕಲನಗಳು ಪ್ರಕಟಗೊಂಡಿವೆ. ಹೃದಯ ಸಂಗಮ, ಭಾವಬಿಂಬ ಎನ್ನುವ ಎರಡು ಸಂಕಲ ಹಾಗೂ ಬದುಕಿನಂಗಳ ಎಂಬ ಕಥಾ ಸಂಕಲನಗಳನ್ನು ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಒಂದು ಕಾದಂಬರಿ ಕೂಡ ಅಚ್ಚಿನಲ್ಲಿದೆ. ಮೂಲತಃ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಡಾ.ಸಂಗಯ್ಯ ಭಯದ ಗೂಡಿನಲ್ಲಿ ಒಂದಾದ ಜೀವಗಳ ತಲ್ಲಣವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಕೊರೋನಾ
ಮಾರಿ ಹೆಮ್ಮಾರಿ ಮಹಾಮಾರಿ ಎಂದು ಹೆದರುತ
ಗೂಡಿನಲ್ಲಿ ಒಂದಾಗಿ ನೋವಿನಲ್ಲಿ ಬದುಕುತಿಹರು ಜನರು
ಬಾಳೆಲ್ಲ ಬಂಧನವಾಗಿ ಜೀವ ಜೀವಗಳು ಹೆದರುತ್ತಾ
ದಾರಿ ಕಾಣದೆ ಕಂಗಾಲಾಗಿ ಕಣ್ಣು ಕಣ್ಣು ಬಿಡುತಿಹರು.
ಕೊರೋನಾ ಸೋಂಕಿನ ಋದ್ರ ತಾಂಡವ ನಿಯಂತ್ರಿಸಲು
ಯುಕ್ತಿಯ ವೃತ್ತಿ ಬಾಂಧವರು ಸೇವೆಯ ಗೈಯುತಿಹರು
ಅಣು ಅಣು ತೃಣಕಾಷ್ಟದ ಭಾಗವಾಗಿ ಕಣ್ಣಿಗೆ ಕಾಣದೆ ದೇಶ
ವಿದೇಶದ ಜನಜಂಗುಳಿಯಿಂದ ಅಂಟುತಿದೆ ಈ ಸೋಂಕು
ಹಸಿವನು ನೀಗಿಸಲು ಶ್ರಮಜೀವಿಗಳು ಕಾರ್ಮೋಡದ
ಕರಿನೆರಳಿನ ಭಯದಲ್ಲಿ ಮಂತ್ರಮುಗ್ಧರಾಗಿ ಕುಳಿತಿಹರು
ಪ್ರಜಾಪ್ರತಿನಿಧಿಗಳು ಆಡಳಿತ ಮಂಡಳಿ ಕೈಮುಗಿದು
ಬೇಡುತ್ತಿಹರು ನಮ್ಮನಿಮ್ಮೆಲ್ಲರ ಜೀವದ ರಕ್ಷಣೆಗಾಗಿ
ಡಾ.ಸಂಗಯ್ಯ ಶೇ ಶಿರೂರಮಠ(ಮುಂಬೈ), ಅಳವಂಡಿ, ಕೊಪ್ಪಳ
