ಕೊಪ್ಪಳ: ಒಂದು ಕಾಲ ಘಟ್ಟದಲ್ಲಿ ಲಂಬಾಣಿ ಸಮಾಜ ಭಟ್ಟಿ ಸಾರಾಯಿ ಮಾರಾಟ ಮಾಡಿಯೇ ತಮ್ಮ ಬದುಕು ಕಟ್ಟಿಕೊಂಡಿತ್ತು. ಆದರೆ ಇದೀಗ ಸಮಾಜದಲ್ಲಿ ಜಾಗೃತಿ ಮೂಡಿದೆ ಎನ್ನುವುದಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿನ ಯುವಕರ ಕಾರ್ಯ ಇದಕ್ಕೆ ಉದಾಹರಣೆಯಾಗಿದೆ.
ಲಾಕ್ ಡೌನ್ ಹಿನ್ನೆಲೆ ಕಳೆದ 40 ದಿನಗಳಿಂದ ಸಾರಾಯಿ ಅಂಗಡಿ ಬಂದ್ ಮಾಡಲಾಗಿತ್ತು. ಆದರೆ ಇಂದು ರಾಜ್ಯದೆಲ್ಲೆಡೆ ಮತ್ತೆ ಸಾರಾಯಿ ಅಂಗಡಿ ಪ್ರಾರಂಭವಾಗಿದ್ದರಿಂದ ಇದಕ್ಕೆ ಗಂಗಾವತಿ ತಾಲೂಕಿನ ತಾಂಡಾ ನಿವಾಸಿಗಳು ನಿರೂಪಿಸಿದ್ದಾರೆ.
ಈ ಬಗ್ಗೆ ಗಂಗಾವತಿ ತಾಲೂಕು ಗೋರಸೇನಾ ಸಂಘಟನೆ ವತಿಯಿಂದ ವಿರೋಧ ವ್ಯಕ್ತ ಪಡಿಸಿ ಸಾರಾಯಿ ಮುಕ್ತ ತಾಂಡಾ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸುವ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿಕೊಂಡ ಕರಪತ್ರ ಹಂಚಲಾಯಿತು.
ನಮ್ಮ ರಾಜ್ಯದಲ್ಲಿ ಕಳೆದ 40 ದಿನಗಳಿಂದ ಮದ್ಯ ಲಭ್ಯವಿಲ್ಲದೆ ಎಲ್ಲರೂ ಮದ್ಯೆ ತ್ಯಜಿಸಿದ್ದಾರೆ. ಇದರಿಂದಾಗಿ ಎಲ್ಲಾ ಮನೆಗಳಲ್ಲಿಯೂ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಖರ್ಚು ಕಡಿಮೆಯಾಗಿದೆ. ಮದ್ಯೆ ಸೇವನೆ ಬಿಟ್ಟಿದ್ದರಿಂದ ನಮಗೇನೂ ಕೆಡಕಾಗಿಲ್ಲ. ಹೀಗಿರುವಾಗ ಈಗ ಮತ್ತೊಮ್ಮೆ ಮದ್ಯೆ ಸೇವನೆ ಯಾಕೆ?
ಸಹೋದರಿಯರೇ, ಕುಟುಂಬ ಸಮೇತರಾಗಿ ಮನೆಯಲ್ಲಿ ಎಲ್ಲರೂ ದೇವರ ಹೆಸರಿನಲ್ಲಿ ಮದ್ಯೆ ತಿರಸ್ಕರಿಸುವ ಸಂಕಲ್ಪ ಮಾಡಿರಿ. ಮದ್ಯಪಾನ ಬೇಡ. ನಲ್ವತ್ತು ದಿನಗಳಲ್ಲಿ ಗಳಿಸಿದ ಆರೋಗ್ಯವನ್ನು ಜೀವನಪೂರ್ತಿ ಉಳಿಸಿಕೊಳ್ಳೋಣ. ಇದುವೇ ಮಹಾತ್ಮಾ ಗಾಂಧೀಜಿ ಕನಸು. ಇದುವೇ ನಮ್ಮೆಲ್ಲರ ಆಶಯ. ನಾವೆಲ್ಲರೂ ಒಂದು ಸಮೃದ್ಧ ಕುಟುಂಬದ ನಿರ್ಮಾಪಕರುಗಳು. ಎಂಬ ಸಂದೇಶ ಸಾರುವ ಕರಪತ್ರ ಹಂಚುವ ಮೂಲಕ ತಾಲೂಕಿನಾದ್ಯಂತ ಜಾಗೃತಿಗೆ ಮುಂದಾಗಿದ್ದಾರೆ.