ಕೇಳ್ರಪ್ಪೋ ಕೇಳ್ರಿ………
ಇದು ಕೊಡಿಯಾಲ ಗ್ರಾಮ ಪಂಚಾಯತಿ ಪ್ರಕಟಣೆ..
ದಯವಿಟ್ಟು ಗಮನವಿಟ್ಟು ಕೇಳ್ರಿ
ಕೋಡಿಯಾಲ ಹೊಸಪೇಟಿಯಿಂದ ಹರಿಹರಕ್ಕಾಗಲಿ… ದಾವಣಗೇರಿಗಾಗಲಿ..
ಯಾರ ಆಚೆ ಹೋಗ ಕೂಡದು.
ಮತ್ತು ದಾವಣಗೆರೆ ಯಿಂದ ಹರಿಹರದಿಂದ ಯಾರಾದ್ರು ನೆಂಟರದರಾ ಅಂತ ಹೇಳಿ ಬಂದ್ರ
ಅವ್ರಿಗೆ ಮೆಡಿಕಲ್ ಚೆಕಪ್ ಮಾಡಿಸಿಕೊಂಡು
ಆಶಾ ಕಾರ್ಯಕರ್ತೆಯರಿಗಾಗಲಿ, ಇಲ್ಲ ಪಂಚಾಯತಿಯವರಿಗಾಗಲಿ, ಇಲ್ಲ ಮಲೇರಿಯಾ ಡಾಕ್ಟರ್ ಮಾಹಿತಿ ತಿಳಿಸ್ರಿ
ಅವ್ರು 14 ದಿವಸ ಒಳಾಗ ಇರಾಕ ಹೇಳ್ತಾರಾ
ಇನ್ನೊಂದು ವಿಷಯಾ ಏನಪಾ ಅಂದ್ರ
ದಯವಿಟ್ಟು ದಾವಣಗೇರಿ ಹರಿಹರಿದ್ದ ಹಣ್ಣು ತರಕಾರಿ ಮಾರೋರ ಬಂದ್ರ
ಅವ್ರ ಹತ್ರಾ ಏನೂ ತಗಣಾಕ ಹೋಗಬ್ಯಾಡ್ರಿ ಹೆಣ್ಣು ಮಕ್ಳು ಕಲ್ಲ ತಗಂಡ ಬೆನ್ನತ್ತಿ ಓಡಿಸ್ರಿ.
ಹಿಂಗೊಂದು ಡಂಗೂರ ಸಾರಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟ ಗ್ರಾಮ ಪಂಚಾಯತ ಯಿಂದ. ಈಗಾಗಲೇ ಕೆಲ ದಿನಗಳಿಂದ ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ನಗರದಿಂದ ಸಮೀಪ ಇರುವ ಕೊಡಿಯಾಲ ಹೊಸಪೇಟ ಗ್ರಾಮದಲ್ಲಿ ಈ ರೀತಿಯಾಗಿ ಡಂಗುರದ ಮೂಲಕ ಜಾಗೃತಿ ಮೂಡಿಸಲಾಯಿತು.
ದಾವಣಗೆರೆ, ಹರಿಹರ ನಗರದಿಂದ ಗ್ರಾಮಕ್ಕೆ ಯಾರು ಬರದಂತೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಗ್ರಾಮದಿಂದಲೂ ಸಹ ಯಾರೂ ಈ ನಗರಗಳಿಗೆ ತೆರಳಬಾರದು ಎಂದು ಹೇಳಲಾಗಿದ್ದು, ಒಂದು ವೇಳೆ ಹಾಗೇನಾದ್ರೂ ಯಾರಾದ್ರೂ ಬಂದಿದ್ರೆ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ಇನ್ನು ಈ ನಗರಗಳಿಂದ ಗ್ರಾಮಕ್ಕೆ ಯಾರಾದರೂ ಹಣ್ಣು, ತರಕಾರಿ ಮಾರಾಟಕ್ಕೆ ಬಂದರೆ ಅಂಥವರ ಬಳಿ ಏನನ್ನು ಕೊಂಡುಕೊಳ್ಳಬಾರದು ಅವರಿಗೆ ಮಹಿಳೆಯರು ಕಲ್ಲು ತಗೊಂಡು ಓಡಿಸುವಂತೆ ಡಂಗೂರ ಸಾರಲಾಗಿದೆ.
