ಉತ್ತರಪ್ರಭ ಸುದ್ದಿ
ಬಾಗೇಪಲ್ಲಿ: ತಾಲೂಕಿನ ದುಗ್ಗಿನಾಕನಪಲ್ಲಿ ಗ್ರಾಮದ ಕೆರೆ ಕಾಲುವೆ ಪ್ರದೇಶದ ಒತ್ತುವರಿ ತೆರವುಗೆ ದೂರು ಸಲ್ಲಿಸಿ ವರ್ಷ ಕಳೆದರೂ ತಾಲೂಕು ಆಡಳಿತ ಒತ್ತುವರಿಗೆ ಮುಂದಾಗಿಲ್ಲ, ಕಾಲುವೆ ಒತ್ತುವರಿ ತೆರವುಗೆ ಮುಂದಾಗಬೇಕೆಂದು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಗೆ ಕಾಳಪ್ಪರಾಳ್ಳಪಲ್ಲಿ ಗ್ರಾಮಸ್ಥರು ದೂರು ಸಲ್ಲಿಸಿದರು. ತಾಲೂಕಿನ ಮಿಟ್ಟೇಮರಿ ಹೋಬಳಿಯ ಜೂಲಪಾಳ್ಯ ಗ್ರಾಮ ಬಳಿ ನಿರ್ಮಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗಳ ಭೂಮಿ ಪೂಜೆಗೆ ಆಗಮಿಸಿದ್ದ ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಗೆ ವಸತಿ ನಿಲಯ, ರಸ್ತೆ, ಕೆರೆ ಕಾಲುವೆ ಒತ್ತುವರಿ ತೆರವುಗೊಳಿಸುವ ಬಗ್ಗೆ ಸ್ಥಳೀಯ ನಾಗರೀಕರು ಹಲವು ಆಹವಾಲುಗಳನ್ನು ಸಲ್ಲಿಸಿದರು.
ತಾಲೂಕಿನ ದುಗ್ಗಿನಾಯಕಪಲ್ಲಿ ಗ್ರಾಮದ ಹೊಸ ಕೆರೆಗೆ ಗುಮ್ಮಾಳಪಲ್ಲಿ ಗ್ರಾಮದ ವಿವಿಧ ಕೃಷಿಕರ ಜಮೀನುಗಳ ಮೂಲಕ ಹಾದು ಹೋಗುವ ಕಾಲುವೆ ಪ್ರದೇಶವನ್ನು ದುಗ್ಗಿನಾಯಕನಪಲ್ಲಿ ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಕಾಲುವೆಯಲ್ಲಿ ಹರಿಯಬೇಕಾಗಿರುವ ಮಳೆ ನೀರು ಕೃಷಿ ಜಮೀನುಗಳ ಮೇಲೆ ಹಾದು ಹೋಗುತ್ತಿದ್ದು ಕೃಷಿ ಬೆಳೆಗಳಿಗೆ ನಷ್ಠ ಸಂಭವಿಸಿ ಜನ, ಜಾನುವಾರಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಕೆರೆ ಕಾಲುವೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸುವಂತೆ ಕಾಳಪ್ಪರಾಳ್ಳಪಲ್ಲಿ ಗ್ರಾಮಸ್ಥರು 2021 ಸೆ.22 ರಂದು ತಹಶೀಲ್ದಾರ್ ಕಚೇರಿಯಲ್ಲಿ ದೂರು ಸಲ್ಲಿಸಿ ಒಂದು ವರ್ಷ ಕಳೆದರೂ ತಾಲೂಕು ಆಡಳಿತ ಸರ್ವೇ ಕಾರ್ಯಕ್ಕೂ ಮುಂದಾಗಿಲ್ಲ, ಒತ್ತುವರಿ ತೆರವುಗೊಳಿಸಿ ಒತ್ತವರಿದಾರರ ವಿರುದ್ದ ಕಾನೂನು ಕ್ರಮವೂ ಜರುಗಿಸುತ್ತಿಲ್ಲ. ದುಗ್ಗಿನಾಯಕನಪಲ್ಲಿ ಗ್ರಾಮದ ಹೊಸ ಕೆರೆ ಕಾಲುವೆ ಪ್ರದೇಶವನ್ನು ಸರ್ವೇ ಮಾಡಿ ಗಡಿ ಗುರುತಿಸಿ ಹದ್ದು ಬಸ್ತು ಮಾಡಿಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಕಾಳಪ್ಪರಾಳ್ಳಪಲ್ಲಿ ಗ್ರಾಮಸ್ಥರಾದ ನಾರಾಯಣಪ್ಪ, ಚಿನ್ನಪ್ಪಯ್ಯ, ವಿಶ್ವನಾಥ, ವೆಂಕಟರವಣಪ್ಪ, ಸಿ.ನಾರಾಯಣಪ್ಪ, ಶ್ರೀರಾಮಪ್ಪ, ಬೈರಾರೆಡ್ಡಿ, ಮಧುಸೂದನರೆಡ್ಡಿ ಸಚಿವರಿಗೆ ದೂರು ಸಲ್ಲಿಸಿದರು.
ವಸತಿ ನಿಲಯಕ್ಕೆ ಮನವಿ:
ತಾಲೂಕಿನ ಮಿಟ್ಟೇಮರಿ ಹೋಬಳಿಯ ಜೂಲಪಾಳ್ಯ ಮತ್ತು ಪೋಲನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 35 ಕ್ಕೂ ಹೆಚ್ಚು ಗ್ರಾಮಗಳಿದ್ದು, 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ವಸತಿ ಶಾಲೆಯ ಅವಶ್ಯಕತೆ ಇದೆ. ಜೂಲಪಾಳ್ಯ ಗ್ರಾಮ ಪಂಚಾಯತಿಯ ನಡಂಪಲ್ಲಿ ಗ್ರಾಮದ ಬಳಿ ಇರುವ ಸರ್ಕಾರಿ ಜಮೀನುನಲ್ಲಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಿಕೊಟ್ಟರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಸ್ಥಳೀಯ ಮುಖಂಡರಾದ ಎನ್.ಜಿ.ಶ್ರೀನಿವಾಸ್, ಗಂಗಿರೆಡ್ಡಿ, ಪೆದ್ದಬೈರಾರೆಡ್ಡಿ, ವೆಂಕಟರೆಡ್ಡಿ, ಈಶ್ವರರೆಡ್ಡಿ, ಆದಿರೆಡ್ಡಿ, ಪಿ.ಗಂಗಿರೆಡ್ಡಿ, ಶ್ರೀರಾಮರೆಡ್ಡಿ, ಬೈರಾರೆಡ್ಡಿ ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಗೆ ಮನವಿ ಸಲ್ಲಿಸಿದರು. ಸ್ಥಳೀಯ ನಾಗರೀಕರಿಂದ ಸಚಿವರು ಆಹವಾಲು ಸ್ವೀಕರಿಸಿ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಒತ್ತುವರಿ, ಶೈಕ್ಷಣಿಕ, ವೈಧ್ಯಕೀಯ ಸೇರಿದಂತೆ ಹಲವು ಇಲಾಖೆಯ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದು, ಸಂಬಂಧಪಟ್ಟ ಇಲಾಖೆ ಆಧಿಕಾರಿಗಳಿಗೆ ಸೂಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗುತ್ತೇನೆಂದು ಭರವಸೆ ನೀಡಿದರು.