ಗ್ರಾ.ಪಂ ಸದಸ್ಯರ ಸರ್ವಾಧಿಕಾರ ಖಂಡಿಸಿ ರೈತರ ಆಕ್ರೋಶ

ಉತ್ತರಪ್ರಭ

ಮುಳಗುಂದ: ಗ್ರಾಮ ಪಂಚಾಯ್ತಿ ಯಿಂದ ಕೇಂದ್ರ ಸರ್ಕಾರದ ವರೆಗೂ ಕಾರ್ಯವೈಕರಿಯನ್ನ ಪ್ರಶ್ನಿಸುವ ಮತ್ತು ಸೌಲಭ್ಯಗಳನ್ನ ಪಡೆಯುವ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಮಮ ಸಂವಿಧಾನ ಕೊಟ್ಟಿದೆ, ಪ್ರಶ್ನಿಸುವವರ ಧ್ವನಿ ಹತ್ತಿಕ್ಕುವ ಗ್ರಾ.ಪಂ ಜನಪ್ರತಿನಿಧಿಗಳ ನಡೆ ಪ್ರಜಾ ಪ್ರಭುತ್ವಕ್ಕೆ ಮಾರಕವಾಗಿದೆ. ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚುನ್ನಪ್ಪ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸಮೀಪದ ಕುರ್ತಕೋಟಿ ಗ್ರಾಮ ಪಂಚಾಯ್ತಿ ಪಿಡಿಒ, ಜನಪ್ರತಿನಿಧಿಗಳ ಸರ್ವಾಧಿಕಾರ ಧೋರಣೆ ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ದಲಿತ ಪರ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ಗ್ರಾ.ಪಂ ಮುಂದೆ ನಡೆದ “ನಮ್ಮ ಪಂಚಾಯ್ತಿ ನಮ್ಮ ಹಕ್ಕು” ಜನಜಾಗೃತಿ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಫೆ.19 ರಂದು ಗ್ರಾಮ ಸಭೆಯಲ್ಲಿ ಅಭಿವೃದ್ದಿ ಪರ ಪ್ರಶ್ನೆ ಮಾಡಿದಕ್ಕೆ ರೈತ ಸಂಘದವರ ಮೇಲೆ ಪಂಚಾಯ್ತಿ ಸದಸ್ಯರು ನಡೆಸಿದ ದೌರ್ಜನ್ಯ ಖಂಡನೀಯ. ದೇಶಕ್ಕೆ ಸ್ವತಂತ್ರ ಸಿಕ್ಕು 75 ವರ್ಷ ತುಂಬಿವೆ, ಗದಗ ಜಿಲ್ಲೆಯಲ್ಲಿ ತುಂಗಭದ್ರ ನದಿ ಹರಿದಿದ್ದರೂ ಇಲ್ಲಿನ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿರುವುದಕ್ಕೆ ಇಲ್ಲಿನ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಕಾರಣ. ರೈತ ಸಮುದಾಯಕ್ಕೆ ಸೌಲಭ್ಯಗಳನ್ನ ಒದಗಿಸಿ ಅದನ್ನ ಬಿಟ್ಟು ಅವರ ಹೋರಾಟವನ್ನ ತಡೆಯುವ ಪ್ರಯತ್ನ ಮಾಡಬೇಡಿ. ಮತ್ತೆ ಇಂತಹ ಘಟನೆಗಳು ಮರುಕಳಿಸಿದರೆ ರಾಜ್ಯವ್ಯಾಪಿ ರೈತ ಸಂಘ ಹೋರಾಟ ಹಮ್ಮಿಕೊಳ್ಳಲಿದೆ. ಎಂದು ಎಚ್ಚರಿಕೆ ನೀಡಿದರು.
ರೈತ ಸಂಘಟನೆ ಸರ್ಕಾರವನ್ನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ರೈತರ ಮೇಲಿನ ಹಲ್ಲೆಯನ್ನ ಸವಾಲಾಗಿ ಸ್ವೀಕರಿಸಿ ಬರುವ ಚುನಾವಣೆಯಲ್ಲಿ ಬದಲಾವಣೆ ತನ್ನಿ, ರೈತ ಸಂಘದವರೆ ಆಡಳಿತ ನಡೆಸುವಂತಾಗಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ರೈತ ಸಂಘದಿಂದ ಮಾತ್ರ ಸಾಧ್ಯ. ಎಂದರು. ಸಭೆಯಲ್ಲಿ ಸೇರಿದ್ದ ನೂರಾರು ರೈತರು ಮತ್ತೊಮ್ಮೆ ಗ್ರಾಮ ಸಭೆಯನ್ನ ಪಂಚಾಯ್ತಿ ಮುಂದೆ ನಡೆಸಬೇಕು, ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಎಂದು ಆಗ್ರಹಿಸಿದರು.
ನಂತರ ಜಿ.ಪಂ ಉಪ ಕಾರ್ಯದರ್ಶಿ ಕಲ್ಲೇಶ ಅವರು ಸಭೆಗೆ ಬಂದು ರೈತರ ಮನವಿ ಸ್ವೀಕರಿಸಿ, ಮಾತನಾಡಿ ಫೆ.19 ರಂದು ನಡೆದ ಗ್ರಾಮ ಸಭೆಯಲ್ಲಿ ಸರಿಯಾಗಿ ಚರ್ಚೆ ನಡೆದಿಲ್ಲ ಎನ್ನುವದು ಗೊತ್ತಾಗಿದೆ, ತಮ್ಮ ಬೇಡಿಕೆಯಂತೆ ಇದೇ ತಿಂಗಳಲ್ಲಿ ಗ್ರಾಮ ಸಭೆಯನ್ನ ವ್ಯವಸ್ಥಿತವಾಗಿ ನಡೆಸುವಂತೆ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸುವಂತೆ ಆದೇಶ ಮಾಡುತ್ತೇನೆ. ಎಂದರು.
ಸಭೆಯಲ್ಲಿ ಗದಗ ತಾ.ಪಂ ಇಒ ಎಚ್.ಎಸ್.ಜಿನಗಾ, ಸಿಪಿಐ ರವಿಕುಮಾರ ಕಪ್ಪತ್ತನವರ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸಾಬಳೆ, ತಾಲೂಕ ಘಟಕದ ಅಧ್ಯಕ್ಷ ವಿಜಯಕುಮಾರ ಸುಂಕದ, ಗ್ರಾಮ ಘಟಕ ಅಧ್ಯಕ್ಷ ರಾಜು ಬಾಳಿಕಾಯಿ, ಮುಖಂಡರಾದ ಭರಮಣ್ಣ ಬಳ್ಳಾರಿ, ಎಲ್ ನಾರಾಯಣಸ್ವಾಮಿ, ಪೂಜಾ ಬೇವುರ,ನಂದು ಪಕಾಲಿ, ರವಿಕುಮಾರ, ಭರ್ಮಣ್ಣ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಯ ರೈತ ಸಂಘದ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು.

Exit mobile version