ಮುಂದಿನ ವರ್ಷದಿಂದ ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ…!

c m bommai

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ – ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಬೆಂಗಳೂರು: ಮುಂದಿನ  ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ರಾಜ್ಯೋತ್ಸವ ಈ  ಪ್ರಶಸ್ತಿಯ ಮೌಲ್ಯ ಹೆಚ್ಚಿಸಬೇಕು. ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ ಪ್ರಶಸ್ತಿಎ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮೀತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು  ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ – 2021ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ.

ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇನ್ನು ಮುಂದೆ ಯಾರೂ ಬಯೋ ಡೇಟಾ ತಯಾರು ಮಾಡಬೇಕಾದ ಮತ್ತು ಪತ್ರಿಕಾ ತುಣುಕುಗಳನ್ನು ಜೋಡಿಸಿಟ್ಟು ತೋರಿಸುವ ಅಗತ್ಯವಿಲ್ಲ ಎಂದು ಪ್ರಶಸ್ತಿ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹಳ ಪ್ರತಿಷ್ಠಿತವಾದದ್ದು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾನದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು.

ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ ಮನಸ್ಸು ಒಳ್ಳೆಯದಿರಬೇಕು. ಪೌರಕಾರ‍್ಮಿಕರಿಗೆ ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ. ಆಯ್ಕೆ ಶೋಧನೆಯಿಂದಾಗಬೇಕು ಹೊರತಾಗಿ ಅರ್ಜಿಗಳಿಂದಲ್ಲ ಎಂದು ಹೇಳಿದರು.

ಪ್ರತಿಭೆಗೆ ವಯಸ್ಸಿನ ಮಿತಿಗಳಿಲ್ಲ: 60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು ಹಿಂದೆ ನ್ಯಾಯಾಲಯದಲ್ಲಿ  ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರತಿಭೆ ಎನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೆಷ್ಟೋ ಮಕ್ಕಳು ಎಷ್ಟೊಂದು ಕ್ಷೇತ್ರಗಳಲ್ಲಿ ಪ್ರತಿಭಾವಂತರಿದ್ದಾರೆ. ಕನ್ನಡ ನಾಡಿನಲ್ಲಿ ಎಷ್ಟು ನೀರಜ್ ಛೋಪ್ರಾ ಒಬ್ಬರಿಗೆ ಒಲಂಪಿಕ್ಸ್ ಚಿನ್ನದ ಪದಕ ದೊರೆತಿರುವುದು ಇಡೀ ದೇಶಕ್ಕೆ ಸ್ಪೂರ್ತಿ ದೊರೆತಿದೆ ಎಂದು ಅಭಿಪ್ರಾಯ ಪಟ್ಟ ಮುಖ್ಯಮಂತ್ರಿಗಳು ವಯಸ್ಸನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದರು.

 ಹಿರಿಯರ ಜೊತೆಗೆ ವಿಶೇಷ ಪ್ರತಿಭೆಗಳನ್ನು ಗುರುತಿಸಲಾಗುವುದು ಎಂದರು.

ಈ ಸಮಾರಂಭದಲ್ಲಿ, ಕಂದಾಯ ಸಚಿವ ಆರ್ ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

Exit mobile version