ಗದಗ: ಬಿಜೆಪಿ ಸರ್ಕಾರದಲ್ಲಿ ರಾಜಕೀಯ ಗಲಾಟೆ, ಹೊಡೆದಾಟ, ಗೊಂದಲಗಳೇ ತುಂಬಿವೆ. ಬಿಜೆಪಿ ಸರ್ಕಾರಕ್ಕೆ ಅಥವಾ ಪಕ್ಷದವರಿಗೆ ಜನರ ಹಿತದ ಕಡೆ ಗಮನವೇ ಇಲ್ಲ ಎಂಬುವುದಕ್ಕೆ ಅವರ ರಾಜಕೀಯ ಕಿತ್ತಾಟಗಳೇ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಎಚ್.ಕೆ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನರು ಕೋವಿಡ್ನಿಂದ ತತ್ತರಿಸಿ ಹೋಗಿದ್ದಾರೆ. ಮೂರನೇ ಅಲೆಯ ಸಿದ್ಧತೆಗಾಗಿ ಎಲ್ಲರೂ ಸಂಪೂರ್ಣ ಗಮನ ಹರಿಸಬೇಕಾಗಿತ್ತು. ಮೂರನೇ ಅಲೇ ಬಹುದೊಡ್ಡ ಸವಾಲಾಗಿ ನಮ್ಮೆದುರು ಬರುತ್ತಿದೆ. ಇಷ್ಟೊಂದು ತೊಂದರೆದಾಯಕ ಸನ್ನಿವೇಶಗಳಲ್ಲಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವ ಗೊಂದಲದಲ್ಲೇ ಸರ್ಕಾರ ನಡೆಸುತ್ತಿದ್ದಾರೆ. ಇದರಿಂದ ಜನರಿಗೆ ಸಿಗಬೇಕಾದ ಒಳ್ಳೆಯ ಆಡಳಿತ ಸಿಗದಂತಾಗಿದೆ. ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ ಸಿದ್ದರಾಮಯ್ಯ
ಮುಖ್ಯಮAತ್ರಿ ಬದಲಾವಣೆ ಅವರ ಪಕ್ಷದ ಆಂತರಿಕ ವಿಷಯವಾಗಿರಬಹುದು. ಆದರೆ, ಇಂತಹ ಕಷ್ಟದ ಸಮಯದಲ್ಲಿ ಎಲ್ಲವನ್ನು ಬದಿಗೊತ್ತಿ ಆಡಳಿತಕ್ಕೆ ಏನು ಗಮಹರಿಸದೇ, ಪಕ್ಷದ ರಾಜಕಾರಣ, ಪಕ್ಷದ ಕಿತ್ತಾಟದ ಬಗ್ಗೆ ಗಮನ ಹರಿಸಿ ಸರ್ಕಾರ ಸಂಪೂರ್ಣ ನಿಸ್ತೆಜವಾಗಿ, ಯಾವುದೇ ಕೆಲಸವಿಲ್ಲದೇ ತೆಪ್ಪಗೆ ಕುಳುತಿದೆ. ಇದು ರಾಜ್ಯದ ಜನರಿಗೆ ಬಿಜೆಪಿ ಸಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಪೆಟ್ರೋಲ್, ಡಿಸೇಲ್ ಬೆಳೆ ಏರಿಕೆ, ವಿದ್ಯುತ್ ಬೆಳೆ ಏರಿಕೆ, ದಿನಸಿ, ಅಡುಗೆ ಎಣ್ಣೆಯ ಬೆಲೆ ಏರಿಕೆಯಿಂದ ಜನ ತತ್ತರಿಸಿಹೊಗಿದ್ದಾರೆ. ಆನರಿಗೆ ಕೈಯಲ್ಲಿ ಉದ್ಯೋಗವಿಲ್ಲದೇ ಬದುಕು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಕಷ್ಟದ ಕಾಲದಲ್ಲಿ ನಾವು ಸಂಪೂರ್ಣವಾಗಿ ನಮ್ಮ ಗಮನವನ್ನ ಸಮಸ್ಯೆಗಳತ್ತ ಹರಿಸಬೇಕು. ಅದೆಲ್ಲವೂ ಬಿಟ್ಟು, ಸಹಿ ಮಡಿಸುವುದು, ಸಿಎಂ ಸೀಟ್ನಿಂದ ಕೆಳಗಿಸುವುದು ಇದೆಲ್ಲ ನಡೆಯುತ್ತಿರುವುದು ನೋಡಿದರೆ, ಬಿಜೆಪಿ ಪಕ್ಷ ಜನರ ಬಗ್ಗೆ ಎಷ್ಟು ನಿಷ್ಕಾಳಜಿ ವಹಿಸಿದೆ ಎಂಬುವುದು ಮುಖಗನ್ನಡಿಯಾಗಿ ಕಾಣುತ್ತಿದೆ. ಬಿಜೆಪಿ ಶಾಸಕರಿಗೆ ನೀಡಿರುವ ಹಣ ಅದು ಅವರದ್ದೇ ಆಗುತ್ತೆ. ಕಾಂಗ್ರೆಸ್ ಶಾಸಕರಿಗೆ ಸರ್ಕಾರದಿಂದ ಕೊಡುವ ದುಡ್ಡು ಬಿಜೆಪಿ ಸರ್ಕಾರದ್ದು ಆಗುತ್ತದೆ ಎನ್ನುವುದು ಇದ್ಯಾವ ನ್ಯಾಯ ಎಂದು ಕಿಡಿಕಾರಿದರು.
