ವೆಂಟಿಲೇಟರ್ ಸಮಸ್ಯೆಗೆ ಶಾಸಕ ಎಚ್.ಕೆ.ಪಾಟೀಲ್ ಸ್ಪಂದನೆ, ಕೊಲ್ಹಾಪುರದಿಂದ ಗದಗ ಜಿಲ್ಲೆಗೆ 25 ವೆಂಟಿಲೇಟರ್

ಗದಗ: ನಮ್ಮ ಜನ ನಮ್ಮ ಕಣ್ಣೆದುರಿಗೆಯೇ ವೆಂಟಿಲೇಟರ್ ಸಮಸ್ಯೆಯಿಂದ ಜೀವ ಕಳೆದುಕೊಳ್ಳವ ಸ್ಥಿತಿ ಬಂದಿರುವುದನ್ನು ಗಮನಿಸಿ ಸಾಲದ ಆಧಾರದ ಮೇಲೆ ಕೊಲ್ಹಾಪುರದ ಡಿ.ವೈ.ಪಾಟೀಲ್ ಟ್ರಸ್ಟ್ 25 ವೆಂಟಿಲೇಟರ್ ಕೊಡಮಾಡುತ್ತಿರುವುದು ಸಂತಸದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಈ ಕುರಿತು ಗದಗ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ವೈ,ಪಾಟೀಲ್ ಟ್ರಸ್ಟ್ ನ ಭಂಟಿ ಪಾಟೀಲ ಅವರು ನಮ್ಮ ಮನವಿಗೆ ಸ್ಪಂದಿಸಿ, ಗದಗ ಜಿಲ್ಲೆಗೆ 25 ವೆಂಟಿಲೇಟರ್ ಕಳುಹಿಸಿಕೊಡುವ ಭರವಸೆ ನೀಡಿದ್ದರು. ಇದರಲ್ಲಿ ಈಗಾಗಲೇ 15 ವೆಂಟಿಲೇಟರ್ ತಲುಪಿದ್ದು, ಇನ್ನು ಐದು ವೆಂಟಿಲೇಟರ್ ಸೋಮವಾರದೊಳಗೆ ತಲುಪುವ ಸಾಧ್ಯತೆ ಇದೆ. ಈಗಾಗಲೇ ಬಂದಿರುವ 13 ವೆಂಟಿಲೇಟರ್ ಗಳನ್ನು ಜಿಮ್ಸ್ ಗೆ, 2 ವೆಂಟಿಲೇಟರ್ ಗಳನ್ನು ರೋಣದ ರಾಜೀವ್ ಗಾಂಧಿ ಆಸ್ಪತ್ರೆಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರದ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಮ್ಸ್ ಸೇರಿದಂತೆ ಬಹಳಷ್ಟು ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇರುವುದು ಗಮನಿಸುತ್ತಿದ್ದೇವೆ. ಜಿಮ್ಸ್ ನಲ್ಲಿ 10-15 ಬೆಡ್ ಗಳು ಖಾಲಿ ಇವೆ. ಆದರೆ ವೆಂಟಿಲೇಟರ್ ಬೇಡಿಕೆ ಮತ್ತು ಅಗತ್ಯತೆ ಹೆಚ್ಚಿದೆ. ವೆಂಟಿಲೇಟರ್ ಅನಿವಾರ್ಯತೆ ಗಮನಕ್ಕೆ ಬಂದಿದೆ. ಜಿಮ್ಸ್ ನಲ್ಲಿ ಈಗಾಗಲೇ 74 ವೆಂಟಿಲೇಟರ್ ಅಳವಡಿಸಲಾಗಿದ್ದು, ಮೇ.27 ರಂದು 28 ವೆಂಟಿಲೇಟರ್ ಗಾಗಿ ರೋಗಿಗಳು ಹೆಚ್ಚುವರಿಯಾಗಿದ್ದರು. ಮೇ.28 ರಂದು 41 ರೋಗಿಗಳು ವೇಟಿಂಗ್ ಗಾಗಿ ಸರತಿಯಲ್ಲಿದ್ದರು. ಮೇ.29 ರಂದು 40 ಜನ ಹಾಗೂ 30 ರಂದು 42 ಜನ ವೇಟಿಂಗ್ ನಲ್ಲಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಗಾಗಿ ಸರತಿಯಲ್ಲಿ ಕಾಯುವಂತಾಗಿದೆ. ವೆಂಟಿಲೇಟರ್ ಗಾಗಿ ವೇಟಿಂಗ್ ನಲ್ಲಿರುವವರ ಸರತಿ ಬರುವಷ್ಟರಲ್ಲಿ ಅವರ ಜೀವದ ಗತಿ ಏನು? ಈ ಕಾರಣದಿಂದ ನಾನು ವೆಂಟಿಲೇಟರ್ ಗಳ ಬಗ್ಗೆ ಗಂಭೀರ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

Exit mobile version