ಕಟ್ಟಡ ಕಾರ್ಮಿಕರು ಲಾಕ್ ಡೌನ್ ಪರಿಹಾರಧನ ಪಡೆಯಲು ಇರುವ ಷರತ್ತುಗಳೇನು?

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿರುವಂತೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.3,000 ಲಾಕ್ ಡೌನ್ ವಿಶೇಷ ಪರಿಹಾರಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಈ ಕುರಿತಂತೆ ಕಾರ್ಮಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿಎಸ್ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕೋವಿಡ್-19ರ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದಿನಾಂಕ 27-04-2021ರಿಂದ 07-06-2021ರವರೆಗೆ ಲಾಕ್ ಡೌನ್ ಘೋಷಿಸಲಾಗಿರುತ್ತದೆ.
ದಿನಾಂಕ 19-05-2021ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಸದರಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ ರೂ.3000ದಂತೆ ಸಹಾಯ ಧನ ವಿತರಿಸುವುದಾಗಿ ಘೋಷಣೆ ಮಾಡಿರುತ್ತಾರೆ.
ಮುಖ್ಯಮಂತ್ರಿಗಳ ಘೋಷಣೆಯಂತೆ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಒಟ್ಟು 24,98,521 ನೊಂದಾಯಿತ ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಲಾ ರೂ.3000ದಂತೆ ಒಟ್ಟು ರೂ.749.55 ಕೋಟಿಗಳಷ್ಟು ಮೊತ್ತವನ್ನು ಮಂಡಳಿಯ ಸುಂಕ ನಿಧಿಯಿಂದ ಸಹಾಯಧನವಾಗಿ ಪಾವತಿಸಲು ಹಾಗೂ ಕಟ್ಟಡ ಕಾರ್ಮಿಕರಿಗೆ ತಲಾ ರೂ.3000ದಂತೆ ಸಹಾಯಧನವನ್ನು ನೇರವಾಗಿ ಅವರುಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಮಾತ್ರ ವರ್ಗಾಯಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಷರತ್ತುಗಳು
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಣಿಗೊಂಡ ಫಲಾನುಭವಿಗಳಿಗೆ ಮಾತ್ರ ಸಹಾಯಧನವನ್ನು ಪಾವತಿಸುವುದು.

ಡಿಬಿಟಿಯ ಮೂಲಕ ವರ್ಗಾಯಿಸುವಾಗ ಫಲಾನುಭವಿಯ ಪುನರಾವರ್ತನೆಯಾಗದಂತೆ, ನಕಲೀಕರಣವಾಗದಂತೆ ಜಾಗ್ರತೆ ವಹಿಸುವುದು.

ಒಬ್ಬರೇ ಫಲಾನುಭವಿಯು ಅಸಂಘಟಿತ ಮತ್ತು ಸಂಘಟಿತ ಎರಡೂ ಮಂಡಳಿಗಳಿAದ ಫಲಾನುಭವಿಯಾಗದಂತೆ ಮತ್ತು ಪರಿಹಾರ ಪಡೆಯುವಲ್ಲಿ ಪುನರಾವರ್ತನೆಯಾಗದಂತೆ ಜಾಗ್ರತೆ ವಹಿಸುವುದು.

ಫಲಾನುಭವಿಯ ಹೆಸರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ದೂರುವಾಣಿ ಸಂಖ್ಯೆ, ವಿಳಾಸ, ಅಂಚೆ ಸೂಚ್ಯಂಕ ಸಂಖ್ಯೆ, ಇತರೆ ಗುರುತಿಸುವಿಕೆಗಳನ್ನು ಸಮರ್ಪಕವಾಗಿರುವ ಬಗ್ಗೆ ದೃಢೀಕರಿಸಿಕೊಂಡು ಖಚಿತಪಡಿಸಿಕೊಳ್ಳುವುದು.

ಕಾಲಕಾಲಕ್ಕೆ ಎಷ್ಟು ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆಯೆಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.
ಸದರಿ ವಿತರಣೆಯು ವಿಳಂಬವಾಗದಂತೆ ಎಚ್ಚರಿಕೆ ವಹಿಸುವುದು.

Exit mobile version