ಲಕ್ಷ್ಮೇಶ್ವರ: ಕೊರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿತರು ಕರವಸ್ತ್ರ ಬಳಸದೆ ಕೆಮ್ಮಿದಾಗ ಸೀನಿದಾಗ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವೈಯಕ್ತಿಕ ಸ್ವಚ್ಛತೆ ಇಲ್ಲದೆ ಕಲುಷಿತ ಕೈಗಳಿಂದ ಮೂಗು ಬಾಯಿ ಪದೇಪದೇ ಮುಟ್ಟುವುದರಿಂದ ಸೋಂಕು ಹರಡಬಹುದು ಸೊಂಕಿತ ಮನುಷ್ಯರು ಮತ್ತು ಪ್ರಾಣಿಗಳ ನಿಕಟ ಸಂಪರ್ಕದಿಂದ ಹರಡಬಹುದು. ಆದ್ದರಿಂದ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಬೇಕು ಎಂದು ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಜಿಲ್ಲಾ ಪಂಚಾಯತ ಹಾಗೂ ಗ್ರಾಮ ಪಂಚಾಯಿತ ಶಿಗ್ಲಿ ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕ ಖಾಸಗಿ ವೈದ್ಯರ ಸಂಘ, ವ್ಯಾಪಾರಸ್ಥರ ಸಂಘ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕ ಸಂಸ್ಥೆ ಇವುಗಳ ಆಶ್ರಯದಲ್ಲಿ ಶಿಗ್ಲಿ ಗ್ರಾಮದಲ್ಲಿ ಇನ್ನೂ ಹೋಗಿಲ್ಲ ಕರೋನಾ ನಾವು ಎಚ್ಚರ ಇರೋಣ ಎಂಬ ನಾನ್ನುಡಿಯನ್ನು ಹೇಳುತ್ತಾ ಕೊರೊನಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂಜಾಗ್ರತಾ ಕ್ರಮವನ್ನು ಪ್ರತಿಯೊಬ್ಬರು ಕೈಗೊಳ್ಳಬೇಕು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮುಚ್ಚಿಕೊಳ್ಳಬೇಕು ಅಥವಾ ಕರವಸ್ತ್ರ ಅಡ್ಡ ಹಿಡಿಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸೀನುವುದು ಮಾಡಬಾರದು. ನಮ್ಮ ಕೈಗಳನ್ನು ಪದೇಪದೇ ಸಾಬೂನು ಬಳಸಿ ತೊಳೆದುಕೊಳ್ಳಬೇಕು. ಕೆಮ್ಮು ಮತ್ತು ನೆಗಡಿ ಹಾಗೂ ಅನಾರೋಗ್ಯದ ಲಕ್ಷಣಗಳನ್ನು ಹೊಂದಿದವರು ಜನರೊಂದಿಗೆ ನಿಕಟ ಸಂಪರ್ಕ ಹೊಂದಿರ ಬಾರದು. ಬಾಯಿಯನ್ನು ಒಣಗಲು ಬಿಡದೆ ನೀರನ್ನು ಕುಡಿಯುತ್ತಾ ಇರಬೇಕು. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಬೇಕು. ಜೊತೆಗೆ ಕೋವಿಡ್ ಲಸಿಕೆಯನ್ನು ಹಿಂಜರಿಯದೇ ಹಾಕಿಸಿಕೊಳ್ಳಬೇಕು. ಲಸಿಕೆಯಿಂದ ಭಯಪಡುವ ಅವಶ್ಯಕತೆ ಇರುವುದಿಲ್ಲ. 45 ವಯಸ್ಸಿನ ಮೇಲ್ಪಟ್ಟವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಾಸ್ಕನ್ನು ಧರಿಸಿ ಕರೋನಾ ಓಡಿಸಿ, ಸೆನಿಟಾಯಿಸರ್ ಬಳಸಿ, ಕೊರೊನಾ ತೊಲಗಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕರೋನಾ ಎಂಬ ಹೆಮ್ಮಾರಿಯನ್ನು ಓಡಿಸಿ ಎಂಬ ಘೋಷಣೆಯೊಂದಿಗೆ ಶಿಗ್ಲಿ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ತಳವಾರ್, ಡಾ. ಶಿರಹಟ್ಟಿ, ಡಾ.ಹೆಬ್ಬಳ್ಳಿ, ಡಾ. ಹೊನ್ನಿಕೊಪ್ಪ, ಅಶೋಕ ಶಿರಹಟ್ಟಿ, ಡಾ. ವಾಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ವೀರಣ್ಣ ಎಚ್ ಪವಾಡದ, ತಾಲೂಕ ಕಾರ್ಯದರ್ಶಿ ಕೆ. ಆರ್.ಲಮಾಣಿ, ಡಿ.ಆರ್. ಗೊಂಡ್ಕರ್, ಪಿ.ಸಿ. ಹಿರೇಮಠ, ರಾಜು ಓಲೆಕಾರ್, ವಿನಾಯಕ ಹೆಬ್ಬಳ್ಳಿ, ಎನ್.ಎನ್. ನೆಗಳೂರ್, ಎಚ್.ಎನ್. ಸೊಪ್ಪಿನ್, ಕರ್ಜಗಿ ಎಸ್.ಎಸ್.ಕೂಡ್ಲಿಮಠ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರು, ವ್ಯಾಪಾರಸ್ಥರ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.