ಸದನಕ್ಕೆ ಅಷ್ಟೇ ಅಲ್ಲ ರಾಜ್ಯಕ್ಕೆ ಮಾಡಿದ ಅವಮಾನವಿದು

ಬೆಂಗಳೂರು : ಸಿದ್ದರಾಮಯ್ಯ ಅವರೇ, ನಿಮ್ಮ ಈ ಸಾಧನೆಯನ್ನು ರಾಜ್ಯದ ಜನತೆ ಮರೆತಿಲ್ಲ. ಕಲಾಪ ಬಹಿಷ್ಕಾರ ನಿಮ್ಮ ದುರಹಂಕಾರ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ. ರಾಜ್ಯದ ಇತಿಹಾಸದಲ್ಲಿ ಬಜೆಟ್ ಕಲಾಪ ಬಹಿಷ್ಕರಿಸಿದ್ದು ಇದೇ ಮೊದಲಾಗಿದ್ದು, ಇದಕ್ಕೆ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಬಿಜೆಪಿ ಸರಣಿ ಟ್ವೀಟ್‍ಗಳನ್ನು ಮೂಡುವ ಮೂಲಕ ಟೀಕಿಸಿದೆ.

ಸಂವಿಧಾನ, ಪ್ರಜಾಪ್ರಭುತ್ವವನ್ನು ಧಿಕ್ಕರಿಸಿದ್ದು ನಿಮ್ಮ ಸಂತೋಷಕ್ಕೆ ಕಾರಣವೇ? ಜನವಿರೋಧಿ ಆಡಳಿತ ಮಾಡಿಕೊಂಡು ಬಂದ ಕಾಂಗ್ರೆಸ್ ಪಕ್ಷದಿಂದ ಪ್ರಜಾಪ್ರಭುತ್ವ, ಸದನದ ಬಗ್ಗೆ ಘನತೆ, ಗೌರವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.

ವೈಯಕ್ತಿಕ ಸಮಸ್ಯೆಗಾಗಿ ಗೌರವಾನ್ವಿತ ಸದನದಲ್ಲಿ ಬಟ್ಟೆ ಬಿಚ್ಚಲು ಶಾಸಕನಿಗೆ ನಿರ್ದೇಶನ ನೀಡುತ್ತಾರೆ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೇ? ಇದು ಕೇವಲ ಸದನಕ್ಕೆ ಮಾಡಿದ ಅವಮಾನವಲ್ಲ. ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ.

ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ವೇಳೆ ಸಭಾತ್ಯಾಗ, ಕೃಷಿ ಕಾಯ್ದೆ ಮಂಡಿಸುವಾಗ ಸಭಾತ್ಯಾಗ, ಭೂ ಸುಧಾರಣಾ ಕಾಯ್ದೆ ಮಂಡಿಸುವಾಗಲೂ ಪಲಾಯನ, ಬಜೆಟ್ ಮಂಡಿಸುವಾಗಲೂ ಸಭಾತ್ಯಾಗ. ಚರ್ಚೆಗೆ ಅವಕಾಶ ನೀಡಿದಾಗ ಚರ್ಚೆ ಮಾಡದ ಕಾಂಗ್ರೆಸ್ ಪಲಾಯನವಾದ ಅನುಸರಿಸುತ್ತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಿದೆ.

Exit mobile version