ಕುಂದ್ರಳ್ಳಿ ವಿದ್ಯಾರ್ಥಿಗಳು ಶಾಲಿಗ್ಹೋಗಾಕ್ 3ಕಿಮಿ ನಡಿಬೇಕಂತ!

ಲಕ್ಷ್ಮೇಶ್ವರ: ಕೊರೊನಾದಿಂದಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದಾದ ನಂತರ ಇತ್ತಿಚೆಗಷ್ಟೆ ಶಾಲೆಗಳು ಆರಂಭಿಸಲಾಗಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಕಾರಣ ಬಸ್ ಸೌಲಭ್ಯ ಕೊರತೆ.

ತಾಲೂಕಿನ ಕುಂದ್ರಳ್ಳಿ ಹಾಗು ತಾಂಡಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದ ಕಾರಣ ಅಂದಾಜು 3 ಕಿಮಿ ನಡೆದುಕೊಂಡು ಶಾಲೆಗೆ ಹೋಗಿ ಬರುವಂತಾಗಿದೆಯಂತೆ. ಕುಂದ್ರಳ್ಳಿ ತಾಂಡಾದಲ್ಲಿ ಅಂದಾಜು 70 ವಿದ್ಯಾರ್ಥಿಗಳು 6 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಸಮೀಪದ ಬಟ್ಟೂರು ಹಾಗು ಕುಂದ್ರಳ್ಳಿಗೆ ಶಾಲೆಗೆ ಹೋಗುತ್ತಾರೆ. ಇನ್ನು ಕುಂದ್ರಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇರುವುದರಿಂದ ಪ್ರೌಢಶಾಲೆಗೆ ಬಟ್ಟೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಬಸ್ ಸೌಲಭ್ಯ ಕೊಡಿ

ಈ ಹಿಂದೇ ಸರಿಯಾದ ಸಮಯಕ್ಕೆ ಬಸ್ ಸಂಚಾರವಿತ್ತು. ಲಾಕ್‌ಡೌನ್ ನಂತರ ಈ ಸಮಸ್ಯೆಯಾಗಿದೆ. ಶಾಲೆಯ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ಹಾಗು ಸಂಜೆ ಬಸ್ ಸಂಚಾರ ಒದಗಿಸಿಕೊಡುವ ಮೂಲಕ ನಮ್ಮ ಶಿಕ್ಷಣಕ್ಕೆ ಅನುಕೂಲ ಮಾಡಿ ಕೊಡಿ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳ ಆಗ್ರಹವಾಗಿದೆ.

 ಕುಂದ್ರಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಗೆ ಬರುವ ವಿದ್ಯಾರ್ಥಿಗಳು ತಾಂಡಾದಿAದ ಅಂದಾಜು 1.5 ಕಿಲೋಮೀಟರ್ ನಡೆದುಕೊಂಡೇ ಬರಬೇಕು. ಇನ್ನು ಪ್ರೌಢಶಾಲೆಗೆ ಕುಂದ್ರಳ್ಳಿ ಹಾಗು ತಾಂಡಾ ಎರಡೂ ಗ್ರಾಮಗಳ ವಿದ್ಯಾರ್ಥಿಗಳು ಬಟ್ಟೂರು ಗ್ರಾಮಕ್ಕೆ ನಡೆದುಕೊಂಡೇ ಹೋಗಬೇಕು. ಇದರಿಂದಾಗಿ ಶಾಲೆಯ ಅವಧಿಯಲ್ಲಿ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದ ಕಾರಣ ನಡೆದುಕೊಂಡೇ ಹೋಗಬೇಕಾಗಿದೆ ಎನ್ನುವುದು ವಿದ್ಯಾರ್ಥಿಗಳ ಅಳಲಾಗಿದೆ.

Exit mobile version