ಪ್ರಧಾನಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುವು ಕರುಣೆ ಇಲ್ಲ: ಜಿ.ಎಸ್.ಪಾಟೀಲ್ ಆರೋಪ

ಗದಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದಲ್ಲಿ 3 ತಿಂಗಳಿಂದ ಹೋರಾಟ ನಡೆಸಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರೂ ಸರ್ಕಾರ ಹಿಂಪಡೆಯುವ ಚಿಂತನೆ ನಡೆಸುತ್ತಿಲ್ಲ. ಆದ್ದರಿಂದ ಫೆ.20 ರಂದು ಜಿಲ್ಲೆಯಲ್ಲಿ ಟ್ರ್ಯಾಕ್ಟರ್, ಬೈಕ್ ರ‍್ಯಾಲಿ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಕಳೆದ ಮೂರು ತಿಮಗಳಿಂದ ರೈತರು ತಮ್ಮ ಕುಟುಂಬದೊಂದಿಗೆ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆಯಲು ತಯಾರಿಲ್ಲ. ಅದ್ದರಿಂದ ಅಖಿಲ ಭಾರತ ಕಾಂಗ್ರೆಸ್ ಘಟಕದಿಂದ ಹಾಗೂ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳು ಕಾಂಗ್ರೆಸ್ ಹಿರಿಯ ಮುಖಂಡರು, ನಾಯಕರ ಸಮ್ಮುಖದಲ್ಲಿ ದಿನ ನಿರ್ಧರಿಸಿದೆ ಎಂದರು.

ಫೆ.20 ರಂದು ಕೃಷಿ ಕಾಯ್ದೆಯನ್ನು ಹಿಂಪಡೆಯಲು ಹೋರಾಟ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಗಜೇಂದ್ರಗಡ ತಾಲೂಕಿನಲ್ಲಿ 500 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಮೂಲಕ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಲಕ್ಷ್ಮೇಶ್ವರದಲ್ಲಿ 500 ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಲಿದೆ. ಫೆ.22 ರಂದು ಮುಂಡರಗಿಯಲ್ಲಿ 500 ಟ್ರ್ಯಾಕ್ಟರ್ ಮೂಲಕ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ರೋಣದಲ್ಲಿ ಬೈಕ್‌ಗಳ ಮೂಲಕ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಫೆ.23 ರಂದು ನರಗುಂದ ತಾಲೂಕಿನಲ್ಲಿ 500 ಟ್ರ್ಯಾಕ್ಟರ್ ಮೂಲಕ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಶಿರಹಟ್ಟಿ, ಮುಂಡರಗಿ ಹಾಗೂ ಡಂಬಳದಲ್ಲಿ ಪಾದಯಾತ್ರೆ ನಡೆಸಲಿದೆ ಎಂದು ತಿಳಿಸಿದರು.

ದೇಶದಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿದೆ. ಇದರಿಮದ ಜನಸಮಾನ್ಯರ ಮೇಲೆ ಹೊರೆ ಬಿದ್ದಂತಾಗಿದೆ. ಇಂದಿನ ಸರ್ಕಾರ ಜನಸಾಮಾನ್ಯರ ಜೊತೆ ಯಾವುದೆ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ಜನರಿಗೆ ಭರವಸೆ ನಿಡಿರುವ ಯೋಜನೆಗಳು ಮೂಲೆಗುಂಪಾಗಿವೆ. ಇಲ್ಲಿಯವರೆಗೆ ಯಾವುದೇ ಕಾಮಗಾರಿಗಳು ಪ್ರಾರಂಭಿಸಿಲ್ಲ. ರೈತರಿಗೆ ಸರಿಯಾಗಿ ಬೆಳೆಗೆ ಪರಿಹಾರ ನೀಡಿಲ್ಲ. ಪ್ರವಾಹ ಪೀಡಿತರಿಗೆ ಕೊಡಬೇಕಾದ ಪರಿಹಾರ ಸಂಪೂರ್ಣ ತಲುಪಿಸಿಲ್ಲ. ಅಂಬಾನಿ ಮೊಮ್ಮಗ ಹುಟ್ಟಿದರೆ ಭೇಟಿಯಾಗುವ ಪ್ರಧಾನಿಗೆ ಬಡವರ ಕಷ್ಟಕ್ಕೆ ಸ್ಪಂದಿಸುವ ಕರುಣೆ ಇಲ್ಲ . ಕೃಷಿ ಕಾಯ್ದೆಯಲ್ಲಿ ಹಲವು ವಿಚಾರಗಳು ಅಡಗಿವೆ. ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಈ ಹೋರಾಟ, ರ‍್ಯಾಲಿ ಹಾಗೂ ಪಾದಯತ್ರೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಶ್ರೀಶೈಲಪ್ಪ ಬಿದರೂರ, ರಾಮಕೃಷ್ಣ ದೊಡಮನಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ ಉಪಸ್ಥಿತರಿದ್ದರು.

Exit mobile version