ಲಕ್ಷ್ಮೇಶ್ವರ: ಈ ಸಾಲಿನ ಅಯವ್ಯಯದಲ್ಲಿ ಗದಗ ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರಕಾರದಿಂದ ಅನುದಾನ ಮೀಸಲಿಡಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಮಾನ್ಯ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಸಲ್ಲಿಸಿದರು.
ಗದಗ-ಯಲವಿಗಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ 4 ವರ್ಷಗಳ ಹಿಂದೆಯೇ 640 ಕೋಟಿ ಘೋಷಣೆ ಮಾಡಿದೆ. ಆದರೆ, ರಾಜ್ಯ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಹತ್ವಾಕಾಂಕ್ಷಿ ಯೋಜನೆ ನೆನೆಗುದಿಗೆ ಬಿದ್ದಿದೆ. ಗದಗ-ಯಲವಿಗಿ ಮಧ್ಯದ 55 ಕಿಮೀ ರೈಲು ಮಾರ್ಗ ನಿರ್ಮಾಣವಾಗದೇ ಜಿಲ್ಲೆಯ ಜನ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳುವ ಬದಲು ನೇರವಾಗಿ ಯಲವಿಗಿ ಮಾರ್ಗವಾಗಿ ಹಾವೇರಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಬಹುದು. ಇದರಿಂದ 100 ಕಿ.ಮೀ ಅಂತರ ಕಡಿಮೆಯಾಗಲಿದೆ.
ರೈಲ್ವೆ ಮಾರ್ಗ ನಿರ್ಮಾಣವಾದಲ್ಲಿ ವ್ಯಾಪಾರ ವಹಿವಾಟಿಗೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹಾಗೂ ಈ ಭಾಗದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕೂಡಲೇ ಗದಗ-ಯಲವಿಗಿ ರೈಲು ನಿರ್ಮಾಣ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
