ಬೆಂಗಳೂರು: ನಗರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣ ಭಾನುವಾರ ಕುರುಬರ ಶಕ್ತಿ ಪ್ರದರ್ಶನ ಕೇಂದ್ರದಂತೆ ಕಾಣುತ್ತಿತ್ತು. ರಾಜ್ಯದ ಮೂಲೆ-ಮೂಲೆಯಿಂದ ಜನಸಾಗರ ಸಮಾವೇಶಕ್ಕೆ ಹರಿದು ಬಂದಿತ್ತು.
ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜ.15ರಂದು ಕಾಗಿನೆಲೆಯಿಂದ ಪಾದಯಾತ್ರೆ ಪ್ರಾರಂಭವಾದಾಗ ಮಾರ್ಗದಲ್ಲಿ ಜೇನುಹುಳುಗಳು ಗೂಡು ಕಟ್ಟಿದ್ದವು. ಈ ಬಗ್ಗೆ ವಿಚಾರಿಸಿದಾಗ ಸಮಾವೇಶಕ್ಕೆ ಜನರು ಜೇನುಹುಳುಗಳಂತೆಯೇ ಬಂದು ಸೇರುತ್ತಾರೆ ಎಂಬ ಸೂಚನೆ ಸಿಕ್ಕಿತ್ತು ಎಂದು ಸ್ವಾಮೀಜಿ ಹೇಳಿದರು. ಕುರುಬರು ಭಾನುವಾರದಂದು ಜೇನುಹುಳುಗಳಂತೆಯೇ ಹರಿದು ಬಂದರು. ನಗರದ ತುಮಕೂರು ರಸ್ತೆ, ನೈಸ್ ರಸ್ತೆಗಳಲ್ಲಿ ಬಸ್ಸುಗಳು, ಕಾರು, ಜೀಪು, ಆಟೊ, ಬೈಕ್ಗಳ ‘ಮೆರವಣಿಗೆಯೇ’ ಸಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ, ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್ಗಳನ್ನೆಲ್ಲ ಹಾರಿಕೊಂಡು ಜನ ಸಮಾವೇಶದ ವೇದಿಕೆಯತ್ತ ನುಗ್ಗುತ್ತಿದ್ದರು. ನೂಕು ನುಗ್ಗಾಟ ನಡೆಸದಂತೆ, ಪೆಂಡಾಲ್ ಕಂಬಗಳನ್ನು ಎಳೆಯದಂತೆ ಹಲವು ಬಾರಿ ಸ್ವಾಮೀಜಿಯವರೇ ಮನವಿ ಮಾಡಿಕೊಳ್ಳಬೇಕಾಯಿತು.
ಕೊಪ್ಪಳದಿಂದ ಚಾಮರಾಜನಗರದವರೆಗೆ, ಮೈಸೂರಿನಿಂದ ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜನ ಸಮಾವೇಶಕ್ಕೆ ಬಂದಿದ್ದರು. ವೇದಿಕೆಯ ಬಳಿ ಜಾಗ ಸಿಗದಿದ್ದರೂ, ರಸ್ತೆಯ ಬದಿಯಲ್ಲಿ ಅಲ್ಲಲ್ಲಿಯೇ ಕುಳಿತು ಹೋರಾಟಕ್ಕೆ ಬೆಂಬಲ ನೀಡಿದರು.
ಕುರಿ ಸಾಕಾಣಿಕೆ ನಮ್ಮ ಕುಲಕಸಬು. ರೋಗಗಳಿಂದ, ಬೇರೆ ಬೇರೆ ಕಾರಣಗಳಿಂದ ಕುರಿಗಳು ಸಾವಿಗೀಡಾಗುತ್ತಿರುತ್ತವೆ. ಆದರೆ, ಪರಿಹಾರ ನಮಗೆ ಸರಿಯಾಗಿ ಸಿಗುವುದಿಲ್ಲ. ಎಸ್ಟಿ ಸಮುದಾಯಕ್ಕೆ ಅನುದಾನ ಬಿಡುಗಡೆ ಆಗಿದೆ. ನಿಮಗೆ
ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುತ್ತಾರೆ. ಮೂಲತಃ ಪರಿಶಿಷ್ಟ ಪಂಗಡದವರೇ ಆಗಿರುವ ನಮಗೆ ಎಸ್ಟಿ ಮೀಸಲಾತಿ ಸಿಕ್ಕರೆ ಇಂತಹ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಕೊಪ್ಪಳದ ಮಂಜುನಾಥ್ ಜಗಾಡಿ ಹೇಳಿದರು.
ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಹಿಂದೆಯೂ ಹಲವು ಪರೀಕ್ಷೆ ಬರೆದಿದ್ದೇನೆ. ಎಸ್ಟಿ ಸಮುದಾಯದ ಸ್ನೇಹಿತರು ನನಗಿಂತ ನಾಲ್ಕೈದು ಅಂಕ ಕಡಿಮೆ ಗಳಿಸಿದ್ದರೂ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಹೆಚ್ಚು ಅಂಕಗಳನ್ನು ಪಡೆದಿದ್ದರೂ ನಾನು ಅವಕಾಶ ವಂಚಿತನಾಗಿದ್ದೇನೆ. ಎಸ್ಟಿ ಮೀಸಲಾತಿ ಸಿಕ್ಕರೆ ಸರ್ಕಾರಿ ನೌಕರಿ ಪಡೆ
ಯಲೂ ಅನುಕೂಲವಾಗುತ್ತದೆ’ ಎಂದು ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗದ ಪ್ರಸನ್ನಕುಮಾರ್ ಎನ್. ಮತ್ತೋಡ್ ಹೇಳಿದರು.
ಎಸ್ಟಿ ಮೀಸಲಾತಿಯಿಂದ ಲಭಿಸುವ ಸೌಲಭ್ಯಗಳ ಬಗ್ಗೆ ಚರ್ಚೆ, ಕುರುಬ ಸಮುದಾಯ ಇದೇ ಮೊದಲ ಬಾರಿಗೆ ಇಂತಹ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗಿದೆ ಎಂದು ಜನ ಮಾತನಾಡುತ್ತಿದ್ದುದು ಸಾಮಾನ್ಯವಾಗಿತ್ತು.
ಕೆಲವು ಬಸ್ಗಳು, ಜೀಪು ಮತ್ತು ಟ್ರ್ಯಾಕ್ಟರ್ಗಳ ಮೇಲೆ ಹಾಕಿದ್ದ ಬ್ಯಾನರ್ನಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಭಾವಚಿತ್ರದ ಜೊತೆಗೆ, ವಿರೋಧಪಕ್ಷದ ನಾಯಕ ಮತ್ತು ಕುರುಬ ಸಮುದಾಯದ ಮುಖಂಡ ಸಿದ್ದರಾಮಯ್ಯ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಪ್ರಾರಂಭದಲ್ಲಿ ಅವರ ಪರ ಜೈಕಾರವೂ ಜೋರಾಗಿತ್ತು. ಆದರೆ ಸಮಾವೇಶಕ್ಕೆ ಸಿದ್ದರಾಮಯ್ಯ ಬಂದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ‘ಇಲ್ಲ, ಇಲ್ಲ ನಮ್ಮ ಪಾಲಿಗೆ ಸಿದ್ದು ಇನ್ನಿಲ್ಲ’ ಎಂದು ಘೋಷಣೆ ಕೂಗಿ ಆಕ್ರೋಶ ಕೂಗಿದರು.
ಜೇನುಹುಳುಗಳಂತೆ ಬಂದ ಕುರುಬರು
