ಗಜೇಂದ್ರಗಡ: ದಾನಗಳಲ್ಲಿಯೇ ಶ್ರೇಷ್ಠತೆಯನ್ನು ಪಡೆದ ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಅಂದಪ್ಪ ಸಂಕನೂರ ಅವರ ಜನ್ಮದಿನ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ಜನಪರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಗಣೇಶ ಗುಗಲೋತ್ತರ ಹೇಳಿದರು.
ಪಟ್ಟಣದ ಮೈಸೂರ ಮಠದಲ್ಲಿ ಸಮಾಜ ಸೇವಕ ಯುವ ಮುಖಂಡ ಅಂದಪ್ಪ ಸಂಕನೂರ ಅವರ ಹುಟ್ಟು ಹಬ್ಬ ಪ್ರಯುಕ್ತ ಅವರ ಅಭಿಮಾನಿ ಬಳಗ ವತಿಯಿಂದ ಬುಧವಾರ ನಡೆದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿಂದು ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಪರಿಣಾಮ ಕೆಲವರಲ್ಲಿ ಹಣದಿಂದ ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಭ್ರಮೆಯಲ್ಲಿ ಮುಳುಗಿದ್ದಾರೆ. ಆದರೆ ಹಣ ಬಲದಿಂದ ಜೀವ ಉಳಿಸಲು ಅಸಾಧ್ಯ ಎನ್ನುವ ತಿಳುವಳಿಕೆ ಮೂಡಿಸುವ ಜೊತೆಗೆ ಕಷ್ಟದಲ್ಲಿರುವ ಜನರಿಗೆ ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಮಾಡುವ ಗುಣವನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕಿದೆ. ಈ ದೆಸೆಯಲ್ಲಿ ಅಂದಪ್ಪ ಸಂಕನೂರ ಅವರ ಅಭಿಮಾನಿ ಬಳಗದವರು ರಕ್ತದಾನದಂತಹ ಮಹತ್ಕಾರ್ಯ ಕೈಗೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ರಾಷ್ಟ್ರೋತ್ಥಾನ ಸಂಸ್ಥೆಯ ಎಸ್.ಕೆ.ಹಳ್ಳಿಹಾಳ ಮಾತನಾಡಿ, ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಮಾಡುವ ಕುರಿತು ತಪ್ಪು ಕಲ್ಪನೆಗಳಿವೆ. ಅವರಿಗೆ ತಿಳುವಳಿಕೆ ಹೇಳಲು ಕೆಲಸವಾಗಬೇಕಿದೆ. ರಕ್ತದ ಕೊರತೆಯಿಂದ ಹಲವರು ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಿದ್ದಾರೆ. ರಕ್ತಕ್ಕಾಗಿ ಅಲೆದಾಡುವಾಗ ಮಾತ್ರ ಜನರಿಗೆ ಅದರ ಮಹತ್ವ ತಿಳಿಯುತ್ತದೆ. ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯಿಂದ ಸಾವನ್ನಪ್ಪುವ ಪ್ರಕರಣಗಳನ್ನು ತಪ್ಪಿಸಬಹುದು. ಈ ದೆಸೆಯಲ್ಲಿ ದಾನಗಳಲ್ಲಿ ಶ್ರೇಷ್ಟತೆಯನ್ನು ಪಡೆದ ರಕ್ತದಾನಕ್ಕೆ ಯುವ ಸಮೂಹ ಮುಂದಾಗಿ ಎಂದರು.
ಯುವ ಮುಖಂಡ ಅಂದಪ್ಪ ಸಂಕನೂರ ಮಾತನಾಡಿ, ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿತು ಬದುಕಬೇಕಿದೆ. ಸಾಮಾಜಿಕ ಸೇವೆಯೇ ನನ್ನ ಧ್ಯೇಯೆ. ಹೀಗಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವುದಲ್ಲದೇ, ನೊಂದವರ ಬಾಳಿಗೆ ಬೆಳಕಾಗುವ ಕೆಲಸ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ನನ್ನ ಜನ್ಮ ದಿನದಂದು ಅಭಿಮಾನಿಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಮಾದರಿಯ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಅವರ ಅಭಿಮಾನಿಗಳು ರಕ್ತದಾನ ಮಾಡಿದರು. ಡಾ. ವಿ.ಎಸ್. ಕಂಠಿ, ಡಾ, ಮಹೇಶ ಮಾಡಲಗೇರಿ, ಸಂತೋಶ ಸಂಕನೂರ, ಅವಿನಾಶ ಕೊಟಗಿ, ಮೆಹೆರಖಾನ ಲೋದಿ, ಪ್ರಭು ಹೂಗಾರ, ಅಂಬರೀಶ ಅಂಗಡಿ, ಶಿವಾನಂದ ಕುರಿ, ಸಮೀರ ಅತ್ತಾರ, ಮುನೀರ ಮುದಗಲ್, ಧರ್ಮಣ್ಣ ಮಾಳೋತ್ತರ, ರಮೀಜಖಾನ ಲೋದಿ, ರಾಜು ಮಾಳೋತ್ತರ ಸೇರಿದಂತೆ ಇತರರು ಇದ್ದರು.
