ಗದಗ: ಇತ್ತಿಚೆಗೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರದ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣವನ್ನು ಕೊನೆಗೂ ಮುಂಡರಗಿ ಪೊಲೀಸರು ಭೇದಿಸಿದ್ದಾರೆ.
ನವೆಂಬರ್ 13 ರಂದು ಫಕ್ಕೀರಪ್ಪ ದೇವೇಂದ್ರಪ್ಪ ತಳವಾರ ಎನ್ನುವಾತನನ್ನು ಕಾರ್ಖಾನೆಯ ಗೋಡೌನ್ ನಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಶಿಂಗಟಾಲೂರು ಗ್ರಾಮದ ಫಕ್ಕೀರಪ್ಪ ದೇವೇಂದ್ರಪ್ಪ ತಳವಾರನನ್ನು ಕಾರ್ಖಾನೆಯ ಗೊಬ್ಬರದ ಗೋದಾಮಿನಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಈ ವಿಚಾರವಾಗಿ ಶಿರನಹಳ್ಳಿ ಗ್ರಾಮದ ರಂಗಪ್ಪ ಅಲಿಯಾಸ್ ರಂಗಸ್ವಾಮಿ ಪೂಜಾರನನ್ನು ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಕೊಲೆ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ವ್ಯಕ್ತಿ ಹಾಗೂ ತನ್ನ ಹೆಂಡತಿ ಮದ್ಯೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.
ಈ ಕುರಿತು ಶುಕ್ರವಾದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಗದಗ ಎಸ್ಸಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ಸುಧೀರಕುಮಾರ್ ಬೆಂಕಿ, ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೊಟೇಶ್ ಒಡೆಯರ್, ಜಿ.ಎನ್.ಮಜ್ಜಗಿ, ಮಂಜುನಾಥ್ ಮಾದರ್, ಶರಣಪ್ಪ ನಾಗೇಂದ್ರಗಡ ಸೇರಿದಂತೆ ಇತರ ಸಿಬ್ಬಂದಿಗಳ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗಳಿಗೆ ಎಸ್ಪಿ ಸತೀಶ್ ಎನ್. ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.
