ಮಿನೂ, ಬೆಂಗಳೂರು
ಬೆಂಗಳೂರು: ಬಹುನಿರೀಕ್ಷಿತ ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಫಲಿತಾಂಶ ಹೊರಬೀಳಲು ಇನ್ನೆರೆಡು ದಿನ ಕಾಯಬೇಕು ಎಂದು ಹೇಳಲಾಗುತ್ತಿದೆ. ಆದರೆ ಈ ಎರಡ್ಮೂರು ದಿನದ ಲೆಕ್ಕಾಚಾರದಲ್ಲಿ ಭೇಟಿಯ ಪರಿಣಾಮ ಹೊರಬೀಳುವುದು ಕಷ್ಟಸಾಧ್ಯ.
ಆದರೆ ಸಿಎಂ ಬಿಎಸ್ವೈ ಹುಮ್ಮಸ್ಸಿನಿಂದ ಕೈಗೊಂಡ ದೆಹಲಿ ಪ್ರವಾಸ ಕೊಂಚ ನಿರಾಶೆ ಮೂಡಿಸಿದಂತಾಗಿದೆ ಎಂದು ಹೇಳಲಾಗುತ್ತಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿ ಪ್ರವಾಸ ಹತ್ತು ಹಲವು ನಿರೀಕ್ಷೆ ಹುಟ್ಟು ಹಾಕಿತ್ತು. ಸಚಿವಾಕಾಂಕ್ಷಿಗಳು ದೆಹಲಿಯತ್ತ ಚಿತ್ತ ಹರಿಸಿದ್ದರು. ಆದರೆ ಕೆಲವರಲ್ಲಿ ಎಲ್ಲಿ ಸಂಪುಟದಿಂದ ತಮ್ಮನ್ನು ಕೈಬಿಡುತ್ತಾರೋ ಎನ್ನುವ ಢವಢವ ಶುರುವಾಗಿತ್ತು. ಇದರ ಜೊತೆಗೆ ಸಿಎಂ ದೆಹಲಿ ಭೇಟಿಯಿಂದ ಎನೆಲ್ಲ ಬದಲಾವಣೆಗಳಾಗುತ್ತವೆಯೋ ಎನ್ನುವ ನಿರೀಕ್ಷೆ ಕೂಡ ರಾಜ್ಯದ ಜನರಲ್ಲಿತ್ತು.
ರಾಜ್ಯದಲ್ಲಿ ಸಂಪುಟ ವಿಸ್ತರಣೆ ಮಾಡುವ ಹುಮ್ಮಸ್ಸಿನೊಂದಿಗೆ ದೆಹಲಿಗೆ ತೆರಳಿದ್ದ ಬಿಎಸ್ವೈ, ನಿರಾಶೆ ಅನುಭವಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬುಧವಾರ ಸಂಜೆ ಅವರ ನಿವಾಸದಲ್ಲಿ ಸಿಎಂ ಭೇಟಿಯಾಗಿದ್ದಾರೆ. 15 ನಿಮಿಷಗಳ ಕಾಲ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ. ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ನಡ್ಡಾ, ಈ ಬಗ್ಗೆ ತಕ್ಷಣಕ್ಕೆ ಯಾವುದೇ ತೀರ್ಮಾನ ತಿಳಿಸಲಿಲ್ಲ. ನಾಲ್ಕೈದು ದಿನಗಳ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಚುನಾವಣೆಯಲ್ಲಿ ಗೆದ್ದಿರುವ ನಾಲ್ವರು ಶಾಸಕರ ಸಂಪುಟ ಸೇರ್ಪಡೆ, ಕೆಲ ನಿಷ್ಕ್ರೀಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡುವ ಬಗ್ಗೆ, ನಡ್ಡಾ ಹಾಗೂ ಬಿಎಸ್ವೈ ಚರ್ಚಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ತಿಳಿಸುವುದಾಗಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಹೈಕಮಾಂಡ್ ಒಂದೆರಡು ದಿನಗಳಲ್ಲಿ ನಿರ್ಧರಿಸಲಿದೆ ಎಂದು ನಡ್ಡಾ ಭೇಟಿ ನಂತರ ಸಿಎಂ ಮಾದ್ಯಮದವರಿಗೆ ಪ್ರತಿಕ್ರಿಯಿಸಿದರು.
ಏನೋ ಹೇಳಲು ಹೋಗಿ…
ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುವ ಜೊತೆಗೆ ಮನವರಿಕೆ ಮಾಡಿಕೊಡುವ ಉದ್ದೇಶ ಸಿಎಂ ಅವರದ್ದಾಗಿತ್ತು. ಆದರೆ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿಗೆ ಕೇವಲ 15 ನಿಮಿಷ ಮಾತ್ರ ಕಾಲಾವಕಾಶವಿತ್ತು. ಹೀಗಾಗಿ ಈ ನಿಗದಿತ ಕಾಲಾವಕಾಶದಲ್ಲಿ ಎಲ್ಲ ವಿಷಯವನ್ನು ಪ್ರಾಸ್ತಾಪಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಆದರೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಉತ್ತರ ಮಾತ್ರ ನಡ್ಡಾ ಅವರಿಂದ ಸಿಕ್ಕಿದೆ. ಆದರೆ ಈ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮುಖ್ಯವಾಗಿ ಸಂಪುಟ ಪುನರ್ ರಚನೆಯೋ? ಅಥವಾ ವಿಸ್ತರಣೆಯೋ ಎನ್ನುವುದು ಎರ್ಡ್ಮೂರು ದಿನಗಳಲ್ಲಿ ಬಗೆಹರಿಯುವ ಲಕ್ಷಣಗಳಿಲ್ಲ. ಡಿಸೆಂಬರ್ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ವಿವಿಧ ರಾಜ್ಯಗಳ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯೇ ಹೆಚ್ಚು.