ಆಯಾ ರಾಜ್ಯಗಳ ಭಾಷೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸಲು ಕಪ್ರವೇ: ಮನವಿ

ಶಿರಹಟ್ಟಿ: ಕೇಂದ್ರ ಸರ್ಕಾರ ವಿವಿಧ ಹುದ್ದೆಗಳಿಗೆ ನಡೆಸುವ ನೇಮಕಾತಿ ಪರೀಕ್ಷೆಗಳನ್ನು ಆಯಾ ರಾಜ್ಯದ ಮಾತೃ ಭಾಷೆಯಲ್ಲಿ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಜಾಪರ ವೇದಿಕೆಯ ತಾಲೂಕು ಘಟಕದ ವತಿಯಿಂದ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಹಸನ್ ತಹಸಿಲ್ದಾರ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ, ಎಸ್‌ಎಸ್‌ಸಿ, ಎಲ್.ಐ.ಸಿ, ಬಿಎಸ್‌ಎನ್‌ಎಲ್ ಸೇರಿದಂತೆ ಇನ್ನೀತರ ಕೇಂದ್ರಿಯ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದಲ್ಲಿ ಕನ್ನಡದಲ್ಲೇ ನಡೆಸಬೇಕು. ಕೇಂದ್ರ ಸರ್ಕಾರ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗೆ ಹೆಚ್ಚು ಮನ್ನಣೆ ನೀಡುತ್ತಿರುವುದರಿಂದ ಹಿಂದಿ ಮತ್ತು ಆಂಗ್ಲ ಭಾಷಿಕರು ಮಾತ್ರ ಹೆಚ್ಚು ಹುದ್ದೆ ಅಲಂಕರಿಸುತ್ತಿದ್ದಾರೆ. ಕನ್ನಡಿಗರು ಸೇರಿದಂತೆ ಇತರ ಭಾಷಿಕರು ಉದ್ಯೋಗವಂಚಿತರಾಗುತ್ತಿರುವುದು ನಿಜವಾದ ಸಂಗತಿ.

ಕೇಂದ್ರ ಸರ್ಕಾರ ಸಂವಿಧಾನದ ೮ನೇ ಪರಿಚ್ಚೇದದಂತೆ ದೇಶದ 22 ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಗಮನಹರಿಸಿ ಕನ್ನಡ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಹಾಗೂ ಇತರೇ ಪರೀಕ್ಷೆಗಳನ್ನು ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಪ್ಪ ಬಿಡವೆ, ಮಂಜುನಾಥ ಕೊಂಚಿಗೇರಿ, ಶಶಿಧರ ದೇಗಾವಿ, ಸಮೀರ ಕಾರಬೂದಿ, ಶಿವಾನಂದ ಸುಲ್ತಾನಪೂರ, ಪ್ರದೀಪ ಮೂರಶಿಳ್ಳಿ, ಮಂಜುನಾಥ ಬಳಿಗಾರ, ಶಶಾಂಕ ಮತ್ತೂರ, ಸತೀಶ ನರಗುಂದ, ಪರಶುರಾಮ ಹುಬ್ಬಳ್ಳಿ ಉಪಸ್ಥಿತರಿದ್ದರು.

Exit mobile version