ಮೈಸೂರು : ಎರಡು ತಲೆ ಹಾವಿನೊಂದಿಗೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಯ್ಯ, ಹೇಮಂತ್, ಯೋಗೇಶ್, ರವಿ ಮತ್ತು ಭರಮಗೌಡ ಬಂಧಿತ ಆರೋಪಿಗಳು. ಅರಣ್ಯ ಅಧಿಕಾರಿಗಳು ಶುಕ್ರವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹಾವನ್ನು ಕಾರಿನಲ್ಲಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಇಲಾಖೆ ಸಿಬ್ಬಂದಿ, ಸಿದ್ದಲಿಂಗಪುರ ಬಳಿ ಕಾರನ್ನು ತಡೆದು ಸರೀಸೃಪ ವಶಪಡಿಸಿಕೊಂಡಿದ್ದಾಗಿ ಡಿಸಿಎಫ್ ಪೂವಯ್ಯ ಹೇಳಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಸಾಗಾಣಿಕೆ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ರಕ್ಷಿಸಿರುವ ಅರಣ್ಯ ಸಂಚಾರಿ ದಳದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಕೋಟ್ಯಾಧಿಪತಿಗಳಾಗಬಹುದೆಂದು ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿ, ಮಣ್ಣುಮುಕ್ಕ ಹಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
