ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಅವರು ಹಗುರವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ನಾಯಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ರವಿ ಹೆಸರನ್ನು ಯಾರೇ ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ ಎಂದು ಶೋಬಾ ಕರಂದ್ಲಾಜೆ ಹೇಳಿದ್ದರು. ಈ ಸಂದರ್ಭದಲ್ಲಿ ಡಿ.ಕೆ. ರವಿ ಅವರ ಪತ್ನಿ, ನಿಮ್ಮ ಹೇಳಿಕೆಯನ್ನು ಕನ್ನಡಿಯ ಮುಂದೆ ನಿಂತು ಹೇಳಿ ಎಂದು ಕಿಡಿಕಾರಿದ್ದರು. ಈಗ ಶಾಸಕ ಸೌಮ್ಯ ರೆಡ್ಡಿ, ಕೆಪಿಸಿಸಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಹರಿಹಾಯ್ದಿದ್ದಾರೆ..
ಈ ಕುರಿತು ಮಾತನಾಡಿ ಉಮಾಶ್ರೀ, ಗಂಡ ಸತ್ತವರು, ಬಿಟ್ಟವರು ಎಲೆಕ್ಷನ್ ಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ. ಇದು ಮಹಿಳೆಯರ ಹಕ್ಕು. ಕುಸುಮಾ ಅವರು ಡಿ.ಕೆ. ರವಿ ಅವರ ಪತ್ನಿ ಎಂದೇ ಹೇಳುತ್ತೇವೆ. ಅವರೊಬ್ಬ ಸಂಸದೆ ಎಂಬುವುದನ್ನು ಮರೆಯಬಾರದು ಎಂದು ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ ಅವರು, ಮಹಿಳೆಯರಿಗೆ ಮಹಿಳೆಯರೇ ಶತೃಗಳು ಎನ್ನುವಂತಾಗಿದೆ. ಹತ್ರಾಸ್, ಬಲರಾಂಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗಿವೆ. ಇದನ್ನು ಜಾತಿ, ಧರ್ಮ ಹಾಗೂ ಪಕ್ಷ ಮೀರಿ ಖಂಡಿಸಬೇಕಾಗಿತ್ತು. ಶೋಭಕ್ಕಾ ನೀವು ಇದನ್ನು ಖಂಡಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.