ಹಾಸನ : ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಅಂತಿಮಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.
ಹೀಗಾಗಿ 17 ಸ್ಥಾನಗಳನ್ನು ಗೆದ್ದರೂ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದ್ದು, 13 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯ ಅಭ್ಯರ್ಥಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬೇಸರ ವ್ಯಕ್ತಪಡಿಸಿದ ರೇವಣ್ಣ ಅವರು, ನ್ಯಾಯದೇವತೆಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಕೃತ್ಯವನ್ನು ಈಗ ಬಿಜೆಪಿ ಮಾಡುತ್ತಿದೆ. ಈ ಎರಡೂ ಪಕ್ಷಗಳಿಗೂ ಜೆಡಿಎಸ್ ಬೆಳೆಯುವುದು ಹೊಟ್ಟೆ ಕಿಚ್ಚಾಗಿದೆ. ಹರಿಹರ ನಗರಸಭೆಗೆ ಮೀಸಲಾಗಿದ್ದ ಎಸ್ಟಿ ಮೀಸಲಾತಿಯನ್ನು ಹಾಸನ ನಗರಸಭೆಗೆ ಹಾಕಿದ್ದಾರೆ. ರಾಜ್ಯದಲ್ಲಿ ಎಸ್ಟಿಗೆ ಮೀಸಲು ಇರುವುದು ಎರಡೇ ಸ್ಥಾನ. ಅದು ಕೊಪ್ಪಳ ಮತ್ತು ಹರಿಹರಕ್ಕೆ. ಇದನ್ನು ಅಡ್ವೋಕೇಟ್ ಜನರಲ್ ಹೈಕೋರ್ಟಿಗೂ ನೀಡಿದ್ದರು. ಆದರೆ, ಸರ್ಕಾರ ಇದನ್ನು ಬದಲಾಯಿಸಿ ನ್ಯಾಯ ದೇವತೆಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಹೀಗಾಗಿ ಕೂಡಲೇ ನ್ಯಾಯಾಲಯ ಇದನ್ನು ಗಮನಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಜೆಡಿಎಸ್ ಗೆ ಬಹುಮತ ಇದೆ ಎಂಬ ಕಾರಣಕ್ಕೆ ಅಧಿಕಾರ ತಪ್ಪಿಸಲು ಬಿಜೆಪಿ ಈ ರೀತಿಯ ಕೃತ್ಯಕ್ಕೆ ಕೈ ಹಾಕಿದೆ ಎಂದು ದೂರಿದ್ದಾರೆ.