ಧಾರವಾಡ: ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಕಾಣುವ ಲಕ್ಷಣ ಕಾಣುತ್ತಿದೆ. ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದರೆ ಬಿಜೆಪಿ ಅದಕ್ಕೆ ಪ್ರತಿತಂತ್ರ ಹೆಣೆಯುವ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಲೇ ಇದೆ. ಇತ್ತಿಚೆಗಷ್ಟೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ದೆಹಲಿಯಲ್ಲಿ ಭೇಟಿಯಾಗಿ ಬಂದಿದ್ದರೂ ಎನ್ನಲಾಗಿದೆ. ಆದರೆ ಈ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮಾತ್ರ ನು ಗೊತ್ತಿಲ್ವಂತೆ!
ಈ ವಿಚಾರವಾಗಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ವಿನಯ್ ಕುಲಕರ್ಣಿ ಅವರು ಬಿಜೆಪಿ ಸೇರುವ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆಯೇ ಆಗಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಆ ರೀತಿ ಸೇರ್ಪಡೆಯಾಗೋಕೆ ಬರೋದಿಲ್ಲ. ಜಿಲ್ಲಾ ಹಾಗೂ ರಾಜ್ಯ ನಾಯಕರ ಜೊತೆ ವರೀಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ತಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಮ್ಮ ರಾಷ್ಟ್ರೀಯ ನಾಯಕರು ಈ ಬಗ್ಗೆ ಚರ್ಚೆ ಮಾಡ್ತಾರೆ. ಇಲ್ಲಿಯವರೆಗೂ ಯಾವ ಚರ್ಚೆಯೂ ಆಗಿಲ್ಲ. ನಾನು ಇದೇ ಜಿಲ್ಲೆಯ ಜನಪ್ರತಿನಿಧಿ, ಇದು ನನ್ನ ಗಮನಕ್ಕೆ ಬಂದಿಲ್ಲ. ಬಿಜೆಪಿ ಕೇಡರ್ ಬೇಸ್ ಪಾರ್ಟಿಯಾಗಿದ್ದು, ಇಲ್ಲಿ ಸ್ಥಳೀಯ ನಾಯಕರೇ ಅವರನ್ನ ರಾಷ್ಟ್ರೀಯ ನಾಯಕರಿಗೆ ಭೇಟಿ ಮಾಡಿಸಬೇಕು. ಆದರೆ ನನಗೆ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಏನು ಗೊತ್ತಿಲ್ಲ ಎಂದರು.
ಉತ್ತರ ಕರ್ನಾಟಕ ರಾಜಕಾರಣದಲ್ಲೀಗ ಭಾರಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಗಳ ಮೇಲಿನ ಬಿಜೆಪಿಯ ಹಿಡಿತ ಸಡಿಲುಗೊಳ್ಳಲು ಬಿಡಬಾರದು ಎನ್ನುವುದು ಬಿಜೆಪಿ ಲೆಕ್ಕಾಚಾರ ಎಂಬ ಅಂದಾಜಿಸುವ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯ ಕಾಂಗ್ರೆಸ್ ಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಡಿಕೆಶಿ ಟಾಕ್ ಶೂಟ್ ಬಿಜೆಪಿ ಪಾಳೆಯದ ನಿದ್ದೆಗೆಡೆಸಿದೆ. ಇತ್ತಿಚೆಗಷ್ಟೆ ನಿಧನ ಹೊಂದಿದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಬೆಳಗಾವಿ ಮನೆಗೆ ಡಿಕೆಶಿ ಭೇಟಿ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಾವಿನ ವಿಷಯದಲ್ಲಿ ರಾಜಕಾರಣ ಬೆರೆಸಬಾರದು ಎಂದು ಕೊಂಡರೂ ಕೂಡ ಡಿಕೆಶಿ ಮಾತಿನ ಒಳ ಅರ್ಥ ಇನ್ನೇನನ್ನೋ ಸೂಚಿಸುವಂತಿತ್ತು. ಟ್ರಬಲ್ ಶೂಟರ್ ನ ನಡೆ ಈ ಭಾಗದ ಬಿಜೆಪಿಗರಿಗೂ ಟ್ರಬಲ್ ಆಗಿತ್ತು. ಇದರ ಮದ್ಯೆದಲ್ಲಿಯೇ ಮಾಜಿ ಸಚಿವ ವಿನಯ್ ಕುಲಕರ್ಣಿ ದೆಹಲಿಯಲ್ಲಿ ಬಿಜೆಪಿ ವರೀಷ್ಟರನ್ನು ಭೇಟಿಯಾದ ವಿಚಾರಕ್ಕೂ ಕೂಡ ರೆಕ್ಕೆ ಪುಕ್ಕ ಬಂದಿವೆ.
ಲಿಂಗಾಯತ ನಾಯಕರನ್ನು ಬಿಜೆಪಿಯತ್ತ ಸೆಳೆಯಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ನಾಯಕ ಸಿ.ಪಿ.ಯೋಗೀಶ್ವರ್ ಸೇರಿದಂತೆ ಹಲವು ಮುಖಂಡರು ಹಾಗೂ ಲಿಂಗಾಯತ ಮಠಾಧೀಶರು ವಿನಯ್ ಅವರನ್ನು ಕಮಲ ಪಾಳೆಯಕ್ಕೆ ಕಳುಹಿಸಲು ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳುತ್ತಿದೆ.
ಇದೇ ಕಾರಣದಿಂದ ವಿನಯ್ ಕುಲಕರ್ಣಿ ಇತ್ತಿಚೆಗಷ್ಟೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗು ಹಾಗೂ ಮುಖಂಡ ಬಿ.ಎಲ್.ಸಂತೋಷ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವೊಂದು ಮಾಹಿತಿ ಪ್ರಕಾರ ಈಗಾಗಲೇ ಯೋಗೀಶ್ ಗೌಡ್ ಕೊಲೆ ಪ್ರಕರಣ ಕ್ಷೀಪ್ರಗತಿಯಲ್ಲಿ ನಡೆಯುತ್ತಿದೆ. ವಿನಯ್ ಕುಲಕರ್ಣಿ ಸಹೋದರ ವಿಜಯ್ ಎರಡು ಬಾರಿ ಸಿಬಿಐ ವಿಚಾರಣೆಗೂ ಒಳಗಾಗಿದ್ದಾರೆ.
ಇನ್ನು ಮುಖ್ಯವಾಗಿ ವಿನಯ್ ಕುಲಕರ್ಣಿ ಸೇರಿ ಹಲವರ ವಿರುದ್ಧ ಸಿಬಿಐ ಅಧಿಕಾರಿಗಳ ತಂಡ ಸಾಕ್ಷಿ ನಾಶದ ಆರೋಪದಡಿ 195 ಎ ಅಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈ ಎಲ್ಲ ಬೆಳವಣಿಗೆಯ ನಡುವೆ ವಿನಯ್ ಕುಲಕರ್ಣಿ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖಂಡರನ್ನು ಭೇಟಿಯಾಗಿದ್ದು ಏಕೆ ಎಂಬುದು ಮಾತ್ರ ಜನರಲ್ಲಿ ಸಂಶಯ ಮೂಡಿಸಿದೆ.
