ಶಿರಹಟ್ಟಿ: ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸದ್ದನ್ನು ಖಂಡಿಸಿ ತಾಲೂಕು ಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲೂಕ ಕುರುಬರ ಸಂಘದ ಅಧ್ಯಕ್ಷ ಮಂಜುನಾಥ ಘಂಟಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತನಾಗಿದ್ದು, ಗೆರಿಲ್ಲಾ ಯದ್ದ ತಂತ್ರವನ್ನು ಅಳವಡಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ. ಇಂತಹ ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿಯನ್ನು ತೆರವುಗೊಳಿಸಿದ್ದು ಅತ್ಯಂತ ಖಂಡನೀಯ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ಕೂಡಲೇ ಸರಕಾರ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಂಡು, ಮೂರ್ತಿ ತೆರವುಗೊಳಿಸಿದ ಪೀರನವಾಡಿ ಗ್ರಾಮದಲ್ಲಿ ಮತ್ತೆ ಅದೇ ಸ್ಥಳದಲ್ಲಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಯಣ್ಣನ ಅಭಿಮಾನಿಗಳಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ತೋಳದ ದಾಳಿಗೆ 15 ಕುರಿಗಳು ಬಲಿ
ಈ ಸಂದರ್ಭದಲ್ಲಿ ಸಂತೋಷ ಕುರಿ, ಗೂಳಪ್ಪ ಕರಿಗಾರ, ನೀಲಪ್ಪ ಪಡಿಗೇರಿ, ಸೋಮನಗೌಡ ಮರಿಗೌಡ್ರ, ಪರಶುರಾಮ ಡೊಮಕಬಳ್ಳಿ, ಮಲ್ಲಿಕಾರ್ಜುನ ಸಾವಿರಕುರಿ, ಸುರೇಶ ಅಕ್ಕಿ, ಮಂಜುನಾಥ ಸೊಂಟನೂರ, ದೇವಪ್ಪ ಬಟ್ಟೂರ, ಮುತ್ತು ಕುರಿ, ಪ್ರವೀಣ ಹಾಲಪ್ಪನವರ, ಮಂಜುನಾಥ ರಡ್ಡೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.