ಮಂಡ್ಯ: ಸಂಸದೆ ಸುಮಲತಾ ತಮಗೆ ಪಾಸಿಟಿವ್ ಬಂದಿದೆ ಎಂದು ಸೋಮವಾರ ಘೋಷಿಸಿದ್ದರು. ತಮ್ಮ ಸಂಪರ್ಕಿತರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದ ಅವರು, ಇನ್ನೂ ಯಾರಾದರೂ ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದರು.
ಸುಮಲತಾ ಸಂಪರ್ಕಕ್ಕೆ ಬಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸಂಖ್ಯೆ ದೊಡ್ಡದಿದ್ದರಿಂದ ಇಂದು ಮಂಗಳವಾರ ನಗರದ ಒಕ್ಕಲಿಗರ ಭವನದಲ್ಲಿ ಕೊರೋನಾ ಟೆಸ್ಟ್ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಪರೀಕ್ಷೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಧಿಕಾರಿಗಳು, ಸ್ಥಳಿಯ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಇವರೆಲ್ಲರ ಜೊತೆ ಸಂಪರ್ಕಕ್ಕೆ ಬಂದಿದ್ದ ದ್ವಿತೀಯ ಸಂಪರ್ಕಿತರು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಗಾದರು.
ಜೂನ್ 30ರಿಂದ ಜುಲೈ 5ರವರೆಗೆ ಸುಮಲತಾ ಮಂಡ್ಯದ ವಿವಿಧ ಭಾಗಗಳಲ್ಲಿ ಅಡ್ಡಾಡಿ ಕೊರೋನಾ ಜಾಗೃತಿ ಮೂಡಿಸಿದ್ದಲ್ಲದೇ, ಕಂಟೇನ್ಮೆಂಟ್ ಪ್ರದೇಶಕ್ಕೂ ಹೋಗಿ ಅಲ್ಲಿನ ಜನರಿಗೆ ನೆರವು ನೀಡಿದ್ದರು. ಈ 6 ದಿನಗಳಲ್ಲಿ ಅವರ ಸಂಪರ್ಕಕ್ಕೆ ಸಾಕಷ್ಟು ಜನ ಬಂದಿದ್ದರು.
ಸುಮಲತಾ ಜಿಲ್ಲಾಡಳಿತ ಕಚೇರಿಗೂ ಹೋಗಿದ್ದರಿಂದ ಅಲ್ಲಿನ ಸಿಬ್ಬಂದಿ ಕೂಡ ಪರೀಕ್ಷೆಗೆ ಹಾಜರಾಗಿದ್ದರು. ಇಂದು ಜಿಲ್ಲಾಡಳಿತ ಭವನವನ್ನು ಸ್ಯಾನಿಟೈಸ್ ಮಾಡಲಾಗಿದೆ.