ಸದ್ಯ ವಿಶ್ವವನ್ನು ಕೊರೊನಾ ಮಹಾಮಾರಿ ಬೆನ್ನಟ್ಟಿ ಕಾಡುತ್ತಿದೆ. ಒಂದು ಸೀನು ಕಂಡರೂ ಜನ ಭಯದಿಂದ ದೂರ ಓಡುತ್ತಾರೆ. ಸದ್ಯ ಮಳೆಗಾಲ ಆವರಿಸಿದೆ. ಇದರಿಂದಾಗಿ ಎಲ್ಲೆಡೆ ತಂಪು. ಇದು ಸಾಮಾನ್ಯ. ಸಾಕಷ್ಟು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಬರುತ್ತಲೇ ಇರುತ್ತದೆ. ಹೀಗಾಗಿ ಸೀನಿದ ಕೂಡಲೇ ಕೊರೋನಾ ಇದೆ ಎಂದು ಭಯಪಡಬಾರದು.
ಚಳಿಗಾಲದಲ್ಲಿ ಡೆಂಗ್ಯೂ ಜ್ವರ ಬರುವುದು, ವೈರಲ್ ಫೀವರ್ ಬರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೊರೊನಾ ಹಾಗೂ ಈ ಜ್ವರಗಳ ನಡುವಿನ ವ್ಯತ್ಯಾಸಗಳನ್ನು ಕಂಡು ಹಿಡಿಯುವುದು ಕಷ್ಟಕರ ಎಂದು ವೈದ್ಯರು ಹೇಳುತ್ತಾರೆ.
ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಲಿದ್ದು, ಇಂತಹ ಸಂದರ್ಭದಲ್ಲಿ ನ್ಯೂಮೋನಿಯಾ, ಅತೀವ್ರ ಜ್ವರ, ಡೆಂಗ್ಯೂ ಆರಂಭವಾಗುತ್ತದೆ. ಹೀಗಾಗಿ ಜನರು ಹೆಚ್ಚು ಜಾಗ್ರತೆ ವಹಿಸಬೇಕು. ಯಾವುದೇ ರೀತಿಯ ಜ್ವರ ಬಂದರೂ, ಶೀತ, ನೆಗಡಿ ಬಂದರೂ ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ.
ಭಾರತದಲ್ಲಿ ಬಾಲ್ಯದ ಮಕ್ಕಳಿಗೆ ನೀಡುವ ಲಸಿಕೆಗಳಿಗೆ ಹೋಲಿಕೆ ಮಾಡಿದರೆ ವಯಸ್ಕರಿಗೆ ನೀಡುವ ಲಸಿಕೆಗಳು ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಸಕ್ಕರೆ ಕಾಯಿಲೆ, ಹೃದಯರಕ್ತನಾಳದ ಕಾಯಿಲೆಗಳು (ಸಿವಿಡಿಗಳು), ಆಸ್ತಮಾ ಮತ್ತು ದೀರ್ಘಕಾಲದ ರೋಗಗಳು (ಸಿಒಪಿಡಿ) ನಂತಹ ಕೊಮೊರ್ಬಿಡಿಟಿ ಹೊಂದಿರುವ ವ್ಯಕ್ತಿಗಳು ಶೀತಜ್ವರ ಮತ್ತು ಕೊರೊನಾ ವೈರಸ್ ಗೆ ಹೆಚ್ಚು ಒಳಗಾಗುತ್ತಾರೆ. ಹೀಗಾಗಿ ಅವರು ಆರೋಗ್ಯದಿಂದ ಉಳಿಯುವ ಪ್ರಯತ್ನ ಹಾಗೂ ಜಾಗೃತಿ ವಹಿಸಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ.