ನವದೆಹಲಿ: ಇಂದು 11.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ಭೇಟಿಗೆ ತೆರಳಿದ ಕೂಡಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಶುರುವಾದವು.
11.30 ರಿಂದ 12 ಗಂಟೆವರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಮೋದಿ ಚರ್ಚೆ ನಡೆಸಿದರು. ರಾಷ್ಟ್ರಪತಿ ಭವನದ ಮೂಲಗಳ ಪ್ರಕಾರ, ಇದೊಂದು ಸಾಂಪ್ರದಾಯಿಕ ಭೇಟಿಯಾಗಿದೆ. ಗಡಿಯಲ್ಲಿ ಸಂಘರ್ಷ, ಕೊರೋನಾ ಕಾರಣದಿಂದ ಉದ್ಭವಿಸಿದ ಆರ್ಥಿಕ ಹಿನ್ನಡೆ ಮುಂತಾದ ರಾಷ್ಟ್ರೀಯ ವಿಷಯಗಳ ಜೊತೆಗೆ ಅಂತಾರಾಷ್ಟ್ರೀಯ ವಿದ್ಯಮಾನಗಳ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ಪ್ರಧಾನಿ ತಂದರು ಎಂದು ಮೂಲಗಳು ತಿಳಿಸಿವೆ. ಇದೊಂದು ರೂಢಿಗತ ಸಾಂಪ್ರದಾಯಿಕ ಪ್ರೊಟೊಕಾಲ್ ಭೇಟಿ ಅಷ್ಟೇ ಎಂದು ಹೇಳಲಾಗಿದೆ.
ಆದರೆ ಪೂರ್ವ ನಿಗದಿತವಲ್ಲದ ಈ ದಿಢೀರ್ ಭಾನುವಾರದ ಭೇಟಿಯ ಹಿಂದೆ ಏನಾದರೂ ತುರ್ತು ಕ್ರಮಗಳನ್ನು ಜಾರಿಗೆ ತರುವ ಉದ್ದೇಶವಿರಬಹುದೇ? ಸದ್ಯಕ್ಕಂತೂ ಯುದ್ಧ ಸಂಭವದ ಸಾಧ್ಯತೆಯಂತೂ ಇಲ್ಲ.
ಹಾಗಾದರೆ, ಸಂಪುಟ ವಿಸ್ತರಣೆ ಇರಬಹುದೇ? ಸಂಪುಟ ವಿಸ್ತರಣೆಗೂ ಮುನ್ನ ರಾಷ್ಟ್ರಪತಿಗಳಿಗೆ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ಪಟ್ಟಿಯನ್ನು ರಾಷ್ಟ್ರಪತಿಗೆ ನೀಡಿ ಅನುಮತಿ ಪಡೆಯುವ ನಿಯಮವೂ ಇದೆ. ಹೀಗಾಗಿ ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗಬಹುದೇ ಎಂಬ ಚರ್ಚೆಗಳು ಎನ್.ಡಿ.ಎ ವಲಯದಲ್ಲಿ ಶುರುವಾಗಿವೆ.
ಈ ಕೊರೋನಾ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇನ್ನಷ್ಟು ಚುರುಕಾಗಿ ಕೆಲಸ ಮಾಡುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂಬ ಮಾತೂ ಇದೆ. ಈ ಹೊತ್ತಿನಲ್ಲಿ, ಸಹಜ ಯೋಚನೆಗಿಂತ, ಚೌಕಟ್ಟಿನಾಚೆ ಯೋಚಿಸುವ (ಔಟ್ ಆಫ್ ಬಾಕ್ಸ್ ಥಿಂಕಿಂಗ್) ಸಂಸದರನ್ನು ಮತ್ತು ಕೆಲವು ನಿವೃತ್ತ ಐಎಎಸ್ ಅಧಿಕಾರಿಗಳನ್ನು ಸಚಿವರನ್ನಾಗಿ ಮಾಡಬಹುದು ಎನ್ನಲಾಗಿದೆ.