ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರೆದರೆ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್-19 ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅಂದಾಜಿಸಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಪ್ರಮಾಣ ಶೇ.4ರಷ್ಟಿದ್ದು, ಇದರ ಅಂದಾಜಿನ ಮೇರೆಗೆ ರಾಜ್ಯದಲ್ಲಿ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರ ದಾಟುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸದ್ಯ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು. ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳುವುದನ್ನು ಮಾಡುವುದರಿಂದ ಸೋಂಕು ಪ್ರಸರಣದ ವೇಗವನ್ನು ತಡೆಯಬಹುದು ಎಂದು ಹೇಳಿದ್ದಾರೆ.
ನಿತ್ಯ ಸೋಂಕಿತರ ಸಂಖ್ಯೆ ಪ್ರಮಾಣ ಶೇ.3ರಷ್ಟಿದ್ದು, ಈ ವೇಗದಲ್ಲಿ ಅಂದಾಜಿಸುವುದಾದರೆ ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 17 ಸಾವಿರ ಗಡಿ ದಾಟಬಹುದು. ಒಂದು ವೇಳೆ ಈ ಪ್ರಮಾಣ ಶೇ.4ಕ್ಕೆ ಏರಿಕೆಯಾದರೆ ಆಗ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 25 ಸಾವಿರವಾಗುತ್ತದೆ ಎಂದು ಹೇಳಿದ್ದಾರೆ.