ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ನಿರ್ದೇಶಕ ಅಭಿನವ್ ಕಶ್ಯಪ್ ಕೂಡ ಫೇಸ್ಬುಕ್ನಲ್ಲಿ ಸಾಕಷ್ಟು ರಹಸ್ಯ ಹಂಚಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡ ದಬಂಗ್ ಸಿನಿಮಾದಲ್ಲಿ ಸಲ್ಮಾನ್ ಖಾನ್ಗೆ ಅಭಿನವ್ ಕಶ್ಯಪ್ ನಿರ್ದೇಶನ ಮಾಡಿದ್ದರು. ಆ ನಂತರ ಅವರಿಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಈ ಸಂಗತಿಯನ್ನು ಮುಚ್ಚಿಟ್ಟುಕೊಂಡಿದ್ದ ಕಶ್ಯಪ್, ಈಗ ಬಹಿರಂಗಪಡಿಸಿದ್ದಾರೆ. ತಮಗೆ ಸತತ ಕಿರುಕುಳ ನೀಡಿರುವ ಸಲ್ಮಾನ್ ಖಾನ್ ಕುಟುಂಬದವರು ಕೊಲೆ ಮತ್ತು ರೇಪ್ ಬೆದರಿಕೆ ಕೂಡ ಹಾಕಿದ್ದರು ಎಂದು ಹೇಳಿದ್ದಾರೆ.
ಬಾಲಿವುಡ್ ವಾತಾವರಣ ಎಷ್ಟು ಕೆಟ್ಟುಹೋಗಿದೆ ಎಂಬುದನ್ನು ಸರಣಿ ಪೋಸ್ಟ್ಗಳ ಮೂಲಕ ವಿವರಿಸುತ್ತಿರುವ ಅಭಿನವ್, ಈಗ ಸಲ್ಮಾನ್ ಖಾನ್ ಒಡೆತನದ ಬೀಯಿಂಗ್ ಹ್ಯೂಮನ್ ಸಂಸ್ಥೆಯ ಬಗ್ಗೆ ಬರೆದುಕೊಂಡಿದ್ದಾರೆ. ಸಲ್ಮಾನ್ ತಂದೆ ಸಲೀಂ ಖಾನ್ ಅವರ ದೊಡ್ಡ ಐಡಿಯಾ ಈ ಸಂಸ್ಥೆ. ತೋರಿಕೆಗಾಗಿ ಬೀಯಿಂಗ್ ಹ್ಯೂಮನ್ ಕಡೆಯಿಂದ ದಾನ-ಧರ್ಮ ಮಾಡಲಾಗುತ್ತದೆ. ದಬಂಗ್ ಶೂಟಿಂಗ್ ಸಮಯಲ್ಲಿ ನನ್ನ ಕಣ್ಣೆದುರಿನಲ್ಲೇ ಕೇವಲ 5 ಸೈಕಲ್ಗಳನ್ನು ವಿತರಿಸಲಾಯಿತು. ಆದರೆ ಮರುದಿನ ಪತ್ರಿಕೆಗಳಲ್ಲಿ 500 ಸೈಕಲ್ ಎಂದು ಸುದ್ದಿ ಪ್ರಕಟ ಆಗಿತ್ತು. ಸಲ್ಮಾನ್ ಅವರಿಗೆ ಇದ್ದ ರೌಡಿ ಇಮೇಜ್ ಅಳಿಸಿಹಾಕುವ ಪ್ರಯತ್ನ ಇದು ಎಂದು ಆರೋಪಸಿದ್ದಾರೆ.
ಬೀಯಿಂಗ್ ಹ್ಯೂಮನ್ ಸಂಸ್ಥೆ 500 ರೂಪಾಯಿಯ ಜೀನ್ಸ್ ಪ್ಯಾಂಟ್ಗಳನ್ನು 5 ಸಾವಿರಕ್ಕೆ ಮಾರಾಟ ಮಾಡುತ್ತಿದೆ. ದಾನ-ಧರ್ಮದ ಹೆಸರಿನಲ್ಲಿ ಅನ್ಯಾಯ ಮಾಡುತ್ತಿದೆ. ಮುಗ್ಧ ಸಾಮಾನ್ಯ ಜನರು ಮೂರ್ಖರಂತೆ ಹಣ ನೀಡುತ್ತಿದ್ದಾರೆ. ಯಾರಿಗೂ ಏನನ್ನೂ ಕೊಡುವ ಉದ್ದೇಶ ಈ ಸಂಸ್ಥೆಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿನವ್ ಕಶ್ಯಪ್ ಮಾಡಿದ ಆರೋಪಗಳಿಗೆ ಪ್ರತಿಯಾಗಿ ಸಲ್ಮಾನ್ ಖಾನ್ ಕುಟುಂಬ ಕಾನೂನಿನ ಮೂಲಕ ಉತ್ತರ ನೀಡಲು ತೀರ್ಮಾನಿಸಿದೆ. ಈ ಬಗ್ಗೆ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ದಬಂಗ್ -2 ಶುರು ಮಾಡಿದ ನಂತರ ಅವರೊಂದಿಗೆ ಯಾವುದೇ ಮಾತುಕತೆ ಇಟ್ಟುಕೊಂಡಿಲ್ಲ. ವೃತ್ತಿಪರವಾಗಿ ನಾವು ಬೇರೆ ಆಗಿದ್ದೇವೆ. ಅವರು ಸದ್ಯ ಏಕೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಅವರ ವಿರುದ್ಧ ಕಾನೂನಡಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.