ಬೆಂಗಳೂರು: ಎನ್ ಆರ್ ಸಿ, ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಸೆರೆಮನೆ ಪಾಲಾಗಿದ್ದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಗೆ ಕಡೆಗೂ ಜಾಮೀನು ಸಿಕ್ಕಿದ್ದು, ಅವರು ಬಿಡುಗಡೆಯಾಗಿದ್ದಾರೆ.
ಫೆ. 21ರಂದು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ, ಎನ್ ಆರ್ ಸಿ ವಿರೋಧಿಸಿ ಬೃಹತ್ ಸಮಾವೇಶ ಆಯೋಜನೆಯಾಗಿತ್ತು. ಸಂಸದ ಅಸಾದುದ್ದಿನ್ ಓವೈಸಿ ಸೇರಿದಂತೆ ಅನೇಕ ಸಾಮಾಜಿಕ ಹೋರಾಟಗಾರರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮೈಕ್ ಹಿಡಿದ ಅಮೂಲ್ಯ ಲಿಯೋನಾ ‘ಪಾಕಿಸ್ತಾನ್ ಜಿಂದಾಬಾದ್’ ಎಂದಿದ್ದರು. ಅವರು ಮುಂದುವರೆದು ಏನನ್ನೋ ಹೇಳು ಹೊರಟಿದ್ದರು. ಆದರೆ, ಸಂಘಟಕರು ಮತ್ತು ಸ್ವತಃ ಅಸಾದುದ್ದಿನ್ ಓವೈಸಿ ಅಮೂಲ್ಯ ಅವರಿಗೆ ಮುಂದೆ ಮಾತಾಡಲು ಅವಕಾಶವನ್ನು ನೀಡಿರಲಿಲ್ಲ.
ಮುಂದಿನ ಬೆಳವಣಿಗೆಯಲ್ಲಿ ಅವರನ್ನು ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಅನಂತರ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು. ಕಡೆಗೆ ಸಿ ಆರ್ ಪಿ ಸಿ ಸೆಕ್ಷನ್ 162 ಕಲಂ 2ರ ಅಡಿಯಲ್ಲಿ ಷರತ್ತುಬದ್ಧ ಜಾಮೀನನ್ನು ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.