ನವದೆಹಲಿ: ದೇಶದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಜಾರಿ ನಿರ್ದೇಶನಾಲಯ(ಇಡಿ)ದ ಆರು ಜನ ಅಧಿಕಾರಿಗಳಗೆ ಮಹಾಮಾರಿ ಬೆನ್ನು ಬಿದ್ದಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಇಡಿ ಕೇಂದ್ರ ಕಚೇರಿಯನ್ನು ಸೀಲ್ಡೌಾನ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸೋಂಕು ತಗುಲಿದ್ದ 6 ಜನ ಅಧಿಕಾರಿಗಳ ಸಂಪರ್ಕದಲ್ಲಿದ್ದ 10 ಜನ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇವರು ಕೇಂದ್ರ ಅರೆ ಸೈನ್ಯ ಪಡೆಯಿಂದ ಇಡಿ ನಿಯೋಗದಲ್ಲಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಕುರಿತ ಅಪರಾಧಗಳ ಕುರಿತು ತನಿಖೆ ನಡೆಸುವ ಕೇಂದ್ರ ಸಂಸ್ಥೆ ಇಡಿ, ಕೊರೊನಾ ಕುರಿತು ಕಟ್ಟೆಚ್ಚರ ವಹಿಸಿತ್ತು. ಕೇಂದ್ರ ಕಚೇರಿಯನ್ನು ವಾರದಲ್ಲಿ ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಅಲ್ಲದೆ ನಿರ್ದಿಷ್ಟ ದಿನದ ಕೆಲಸಕ್ಕೆ ಅಗತ್ಯವಿರುವ ನೌಕರರನ್ನು ಮಾತ್ರ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೂ ಅಧಿಕಾರಿಗಳಿಗೆ ಸೋಂಕು ತಗುಲಿದೆ.