ಬೆಂಗಳೂರು: ಕೊರೋನಾ ಸೋಂಕು ತಪಾಸಣೆಗೆ ಒಳಪಡುವ ಸಾರ್ವಜನಿಕರು ತಾವು ಬಳಸುವ ತಮ್ಮದೇ ಮೊಬೈಲ್ ಸಂಖ್ಯೆಯನ್ನು ಅಧಿಕೃತ ನಮೂನೆಯಲ್ಲಿ ದಾಖಲಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಕೆ.ಸುಧಾಕರ್ ಮನವಿ ಮಾಡಿದ್ದಾರೆ .
ತಪಾಸಣೆಗೆ ಒಳಪಡುವ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿರಬೇಕು. ಜೊತೆಗೆ ತಮ್ಮದೇ ಮೊಬೈಲ್ ಸಂಖ್ಯೆ ದಾಖಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮ್ಮದಲ್ಲದ ಮೊಬೈಲ್ ಸಂಖ್ಯೆ ದಾಖಲಿಸಿದರೆ ಸೋಂಕು ತಪಾಸಣೆ ಮತ್ತು ಇತರೆ ಮಾಹಿತಿಗಳು ಅವರಿಗೆ ತಲುಪುವುದಿಲ್ಲ. ಜೊತೆಗೆ ತಪಾಸಣೆಗೆ ಒಳಪಟ್ಟವರಿಗೆ ಆರೋಗ್ಯ ಸೇತು ಆ್ಯಪ್ ಮೂಲಕ ನಿಯಮಿತವಾಗಿ ರವಾನಿಸುವ ಯಾವುದೇ ಮಾಹಿತಿ ಸಿಗುವುದಿಲ್ಲ. ಹೀಗಾಗಿ ತಾವು ಬಳಸುವ ಮೊಬೈಲ್ ಸಂಖ್ಯೆಯನ್ನು ಮಾತ್ರವೇ ನಮೂದಿಸಬೇಕು ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಈ ಹಿಂದೆ ಕೊರೋನಾ ಸೋಂಕು ತಪಾಸಣೆಗೆ ಒಳಗಾದ ಕೆಲವರು ತಮ್ಮ ಸಂಬಂಧಿಗಳ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ಇದರಿಂದ ಅಧಿಕೃತ ಮಾಹಿತಿ ಅವರಿಗೆ ತಲುಪದೇ ಸಾಕಷ್ಟು ಗೊಂದಲಗಳು ಎದುರಾದವು. ಅದೇ ರೀತಿಯ ತಪ್ಪುಗಳು ಪುನರಾವರ್ತನೆ ಆಗದಂತೆ ತಪ್ಪಿಸುವ ಉದ್ದೇಶದಿಂದ ಸರಿಯಾದ, ತಾವೇ ಬಳಸುವ ಮೊಬೈಲ್ ಸಂಖ್ಯೆ ನಮೂದಿಸುವಂತೆ ಹೇಳಿಕೆಯಲ್ಲಿ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.