ರೈತರನ್ನು ರಾಸ್ಕಲ್ ಎಂದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಮಾನ ಉಳಿಸಿಕೊಳ್ಳಿ: ಸಿದ್ದರಾಮಯ್ಯ

ಕೋಲಾರ: ರೈತ ಹೋರಾಟಗಾರರನ್ನು ರಾಸ್ಕಲ್ ಎಂದು ಜರಿದ ಸಚಿವ ಮಾಧುಸ್ವಾಮಿ ಅವರ ವರ್ತನೆ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ರೈತ ಸಂಘಟನೆ ಮಹಿಳಾ ಕಾರ್ಯಕರ್ತರಿಗೆ ಅವಮಾನವಾಗಿದೆ ಎಂಬ ಅಸಮಾಧಾನ ಕೇಳಿ ಬಂದಿದೆ. ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ.

ಕೆರೆಕಟ್ಟೆ ಒಡೆಯದಂತೆ ಸಚಿವರಿಗೆ ಮನವಿ ಪತ್ರ ಕೊಡಲು ಬಂದ ವೇಳೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ನಾನು ಭಾರಿ ಕೆಟ್ಟ ಮನುಷ್ಯ ಬಾಯಿ ಮುಚ್ಚು ರಾಸ್ಕಲ್ ಎಂದು ಆವಾಜ್ ಹಾಕಿದ್ದಾರೆ. ಸಚಿವರ ಈ ಘರ್ಜನೆಗೆ ಕರ್ನಾಟಕ ರಾಜ್ಯ ರೈತ ಸಂಘದ  ಜಿಲ್ಲಾಧ್ಯಕ್ಷೆ ನಳಿನಿ ವಿರೋಧ ಪಡಿಸಿದರಾದರೂ ಮಧ್ಯ ಪ್ರವೇಶ ರೈತ ಸಂಘಟನೆ ಕಾರ್ಯಕರ್ತೆಯನ್ನು ಪೊಲೀಸರು ಹೊರಗಡೆ ಕಳುಹಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಅವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

Exit mobile version