ಮಡದಿ ಮಾಂಗಲ್ಯ ಸರ ಮಾರಿ ಕುಡಿದ ಆತ ಮಾಡಿದ್ದೇನು?

ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿದ್ದ ಪಾಪಿ ಪತಿಯೊಬ್ಬ ಮಡದಿಯನ್ನೇ ಕೊಲೆ ಮಾಡಿರುವ ಘಟನೆ ಚೇಳೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಸಿ. ಹೊಸ ಹುಡ್ಯದಲ್ಲಿ ನಡೆದಿದೆ.

ಹೊಸ ಹುಡ್ಯ ಗ್ರಾಮದ ಮಧುರ(22) ಮೃತ ಮಹಿಳೆ. ಎರಡು ವರ್ಷಗಳ ಹಿಂದೆ ಚೇಳೂರು ಹೋಬಳಿಯ ಮರವಪಲ್ಲಿ ಗ್ರಾಮದ 24 ವರ್ಷದ ಬಾಲಚಂದ್ರ ಗೌಡನನ್ನು ಪ್ರೀತಿಸಿ ಮಧುರ ವಿವಾಹವಾಗಿದ್ದರು. ಕೆಲವೇ ದಿನಗಳ ಹಿಂದೆ ಪತ್ನಿ ತಮ್ಮ ತವರೂರಿಗೆ ತೆರಳಿದ್ದರು. 10 ತಿಂಗಳ ಗಂಡು ಮಗು ಈ ದಂಪತಿಗೆ ಇದೆ. ಈ ನಡುವೆ ಕುಡಿಯುವ ಚಟ ಬೆಳಸಿಕೊಂಡಿದ್ದ ಪತಿ ಬಾಲಚಂದ್ರಗೌಡ, ಕಳೆದ ಒಂದು ವಾರದಿಂದ ಹೆಂಡತಿಯ ಮನೆಯಲ್ಲಿಯೇ ಇದ್ದ.

ಕುಡಿಯಲು ಹಣವಿಲ್ಲದ ಕಾರಣ ಮಡದಿಯ ಮಾಂಗಲ್ಯವನ್ನೇ ಅಡವಿಟ್ಟ ಪಾಪಿ, ಮದ್ಯ ಸೇವಿಸಿ ಹೆಂಡತಿಯೊಂದಿಗೆ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತೆರಳಿ, ಕತ್ತು ಹಿಸುಕಿ ಕೊಂದು ಹಾಕಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾನೆ. ಈ ಕುರಿತು ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version