ಬೆಂಗಳೂರು: ಈಗಾಗಲೇ ಲಾಕ್ ಡೌನ್ ಹಿನ್ನೆಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದರೆ ಈ ಬಗ್ಗೆ ಹತ್ತು ಹಲವು ಚರ್ಚೆಗಳು ನಡೆದಿದ್ದವು. ಇದಕ್ಕೆ ಶ್ವತ: ಶಿಕ್ಷಣ ಸಚಿವರೇ ಫೇಸ್ ಬುಕ್ ಲೈವ್ ಬರುವ ಮೂಲಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಇದ್ದ ಗೊಂದಲ ನಿವಾರಿಸಿದ್ದಾರೆ.
ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಟ್ಟು ಗೊಂದಲಕ್ಕೊಳಗಾಗಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಪಾಲಕರಿಗೆ ಧೈರ್ಯ ತುಂಬಿದ್ದಾರೆ.
ಫೇಸ್ ಬುಕ್ ಲೈವ್ ಹೈಲೇಟ್ಸ್
- ಲಾಕ್ಡೌನ್ ವಾತಾವರಣವು ತಿಳಿಯಾದ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು.
- ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್, ಟೆಂಪರೇಚರ್ ನೋಡುವ ಸಾಧನಗಳ ವ್ಯವಸ್ಥೆ ಮಾಡಲಾಗುವುದು.
- ಪ್ರತೀ ವಿದ್ಯಾರ್ಥಿಗಳೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕು.
- ಹಾಸ್ಟೆಲ್ಗಳಲ್ಲಿದ್ದು ಕಲಿಯುತ್ತಿರುವ ಸದ್ಯ ಲಾಕ್ಡೌನ್ ಹಿನ್ನಲೆಯಲ್ಲಿ ಮನೆಗೆ ಬಂದಿರುವ ವಿದ್ಯಾರ್ಥಿಗಳಿಗೆ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದನ್ನು ಶಿಕ್ಷಣ ಇಲಾಖೆ ಪರಿಶೀಲಿಸುತ್ತಿದೆ.
- ವಿದ್ಯಾರ್ಥಿಗಳು ಅಧಿಕೃತವಾಗಿ ಶಿಕ್ಷಣ ಇಲಾಖೆ ಹೊರಡಿಸುವ ವೇಳಾಪಟ್ಟಿಗಳನ್ನು ಮಾತ್ರ ಗಮನಿಸಿ.
- ಇಲಾಖೆ ಇದುವರೆಗೂ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಿಲ್ಲ
- ಒಂದು ವೇಳೆ ದಿನಾಂಕ ನಿಗದಿಪಡಿಸಿದರೆ ವೇಳಾಪಟ್ಟಿಗಿಂತ 15-20 ದಿನಗಳ ಮುಂಚಿತವಾಗಿ ನಿಮಗೆ ಮಾಹಿತಿ ನೀಡಲಾಗುವುದು.
- ವಿದ್ಯಾರ್ಥಿಗಳು ಪರೀಕ್ಷೆ ಮಾಡಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾರೆ.
- ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಯಾವುದೇ ತೊಂದರೆಯಾಗದಂತೆ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಶಿಕ್ಷಣ ಇಲಾಖೆಯ ಮೇಲಿದೆ.
- ಇಲಾಖೆ ಈ ಕುರಿತು ಚಿಂತನೆಗಳು ನಡೆಸುತ್ತಿದೆ
- ದೂರದರ್ಶನದಲ್ಲಿ ಈಗಾಗಲೇ ಪುನರ್ಮನನ ತರಗತಿಗಳು ಆರಂಭಗೊಂಡಿದ್ದು ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ 45 ನಿಮಿಷಗಳ ಕಾಲ ಪಾಠ ನಡೆಸಲಾಗುತ್ತಿದೆ.
- ಈ ವಾರದ ಕೊನೆಯಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸಲಾಗುವುದು.
- 16 ದಿನಗಳ ಕಾಲ ತರಗತಿ ನಡೆಯಲಿದ್ದು 17 ನೇ ದಿನ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಯಾವ ರೀತಿ ಪ್ರಶ್ನೆಗಳಿಗೆ ಉತ್ತರಿಸಬೇಕೆನ್ನುವುದನ್ನು ಕಲಿಸಲಾಗುವುದು ಎಂದಿದ್ದಾರೆ.
- ಸಾಮಾನ್ಯವಾಗಿ ಒಂದು ಪರೀಕ್ಷಾ ಕೊಠಡಿಯಲ್ಲಿ 24 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿತ್ತು. ವಿದ್ಯಾರ್ಥಿಗಳ ನಡುವಿನ ಅಂತರ ಅಧಿಕಗೊಳಿಸುವ ಸಲುವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಕುರಿತು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ.