ವಲಸಿಗರ ರೈಲ್ವೇ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾಗಾಂಧಿ

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ವಲಸಿಗರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಈ ಕುರಿತು ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿರುವ ಅವರು, ಅಗತ್ಯ ವಲಸೆ ಕಾರ್ಮಿಕರಿಗೆ ಅವರವರ ಊರುಗಳಿಗೆ ಹೋಗಲು ರೈಲ್ವೆ ಪ್ರಯಾಣದ ವೆಚ್ಚ ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಬಡವರಿಗೆ ಕಾಂಗ್ರೆಸ್ ನ ವಿನಮ್ರ ಕೊಡುಗೆ ಇದು. ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಬಡವರು ತಾವು ದುಡಿಯುತ್ತಿದ್ದ ಸ್ಥಳದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅಲ್ಲದೇ, ಅವರಿಗೆ ಕೆಲಸವೂ ಇಲ್ಲದ ಕಾರಣ ಕೈಯಲ್ಲಿ ಹಣವಿಲ್ಲ. ಈ ಕಾರಣಕ್ಕೆ ಅವರ ಸಹಾಯಕ್ಕೆ ಕಾಂಗ್ರೆಸ್ ಮುಂದೆ ಬಂದಿದೆ ಎಂದು ಹೇಳಿದ್ದಾರೆ.

ವಿದೇಶಗಳಲ್ಲಿ ಸಿಲುಕಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ಆಸಕ್ತಿ ತೋರಿಸುವ ನಮ್ಮ ಸರ್ಕಾರ, ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಖಾಳಜಿ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

Exit mobile version